ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿಗಳು ತರಾತುರಿಯಲ್ಲಿ ನಡೆಸಿದ್ದ ಟೆಂಡರ್ ಪ್ರಕ್ರಿಯೆಗೆ ತಡೆ ಬಿದ್ದಿದೆ.
ನಗರ ವ್ಯಾಪ್ತಿಯ ಪಾಲಿಕೆಯ ವಿವಿಧ ವಲಯ ಕಚೇರಿಗಳ ಮಟ್ಟದಲ್ಲಿ ಘನತ್ಯಾಜ್ಯ ವಸ್ತುಗಳ ವಿಲೇವಾರಿಗಾಗಿ ನೀಡಿದ್ದ ಸುಮಾರು 400ಕೋಟಿ ರೂ.ಮೊತ್ತದ ಟೆಂಡರ್ ಪ್ರಕ್ರಿಯೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗುವುದು ಎಂದು ಮಹಾನಗರ ಪಾಲಿಕೆ ಮಂಗಳವಾರ ಹೈಕೋರ್ಟ್ಗೆ ಮುಚ್ಚಳಿಕೆ ನೀಡಿದೆ.
ಟೆಂಡರ್ ಪ್ರಕ್ರಿಯೆಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿದೆ ಎಂದು ವಾದಿಸಿ ಮಾಜಿ ಮೇಯರ್ ಟಿ.ಆರ್.ರಮೇಶ್ ಪಾಲಿಕೆ ಮಾಜಿ ಸದಸ್ಯ ಪಾರಿ ಸೇರಿದಂತೆ ಇನ್ನಿತರರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರು ಈ ಮುಚ್ಚಳಿಕೆ ನೀಡಿದ್ದು, ರಾತ್ರೋರಾತ್ರಿ ನಡೆಯುತ್ತಿದ್ದ ಟೆಂಡರ್ ಪ್ರಕ್ರಿಯೆಗೆ ಕಡಿವಾಣ ಬಿದ್ದಂತಾಗಿದೆ.
ನಗರ ವ್ಯಾಪ್ತಿಯಲ್ಲಿನ ಘನತ್ಯಾಜ್ಯ ವಸ್ತುಗಳ ವಿಲೇವಾರಿಗಾಗಿ ಸಾವಿರಾರು ಕೋಟಿ ರೂ.ಮೌಲ್ಯದ ಟೆಂಡರ್ಗೆ ತರಾತುರಿಯಲ್ಲಿ ಆಹ್ವಾನಿಸಲಾಗಿತ್ತು. ಆದರೆ ಇದರಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಇಷ್ಟೊಂದು ದುಬಾರಿ ಮೊತ್ತದ ಪ್ರಕ್ರಿಯೆಗೆ ಜನಪ್ರತಿನಿಧಿಗಳ ಕುಮ್ಮಕ್ಕೇ ಕಾರಣ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.