ಕಬ್ಬು ಬೆಳೆಗಾರರ ಬೇಡಿಕೆಯನ್ನು ಈಡೇರಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಮಂಗಳವಾರ ಸಕ್ಕರೆ ಸಚಿವ ಶಿವರಾಜ್ ತಂಗಡಿ ಅವರನ್ನು ಘೇರಾವ್ ಮಾಡಿದ ಘಟನೆ ನಡೆಯಿತು.
ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ವಿಧಾನಸೌಧ ಮುತ್ತಿಗೆ ಚಳವಳಿ ನಡೆಸಿದರು.ವಿಧಾನಸೌಧದ ಉತ್ತರ ದ್ವಾರದ ಬಳಿ ರೈತರು ಸಮಾವೇಶಗೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರೈತರ ಸಮಸ್ಯೆ ಆಲಿಸಲು ಬಂದ ಸಕ್ಕರೆ ಸಚಿವ ಶಿವರಾಜ ತಂಗಡಗಿ ರೈತರನ್ನು ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ, ಸಚಿವರ ಮಾತಿಗೆ ಮರುಳಾಗದ ರೈತರು ಸಚಿವರ ವಿರುದ್ಧ ಹರಿಹಾಯ್ದು ಘೇರಾವ್ ಹಾಕಿದರು.
ಈ ಹಿಂದೆ ಬೆಳಗಾವಿಯಲ್ಲಿ ಇದೇ ರೀತಿ ಮಾತನಾಡಿದ್ದೀರಿ. ನಿಮ್ಮ ಪೊಳ್ಳು ಭರವಸೆ ನಮಗೆ ಬೇಕಾಗಿಲ್ಲ ಎಂದು ರೈತರು ಸಚಿವ ತಂಗಡಿಯನ್ನು ತರಾಟೆಗೆ ತೆಗೆದುಕೊಂಡರು.
ಮುಖ್ಯಮಂತ್ರಿ ಯಡಿಯೂರಪ್ಪನವರೇ ಖುದ್ದಾಗಿ ಇಲ್ಲಿಗೆ ಬರಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸಲು ಲಿಖಿತ ಭರವಸೆ ನೀಡಬೇಕೆಂದು ಪಟ್ಟು ಹಿಡಿದ ರೈತರನ್ನು ಸಮಾಧಾನ ಮಾಡಲಾಗದೇ ಬಂದ ದಾರಿಗೆ ಸುಂಕ ಇಲ್ಲವೆಂದು ತಂಗಡಿ ವಾಪಸ್ ತೆರಳಿದರು.