ಕನ್ನಡ ನಾಡು-ನುಡಿ, ಗಡಿ ಮತ್ತು ನೀರಿನ ಸಮಸ್ಯೆಗಳ ಕುರಿತಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ರಾಜ್ಯದ ಸಂಸದರು, ಸಚಿವರು, ಹಿರಿಯ ಸಾಹಿತಿಗಳು, ಕಲಾವಿದರು, ಶಿಕ್ಷಣ ತಜ್ಞರನ್ನೊಳಗೊಂಡ ನಿಯೋಗವನ್ನು ದೆಹಲಿಗೆ ಕೊಂಡೊಯ್ಯಲು ನಿರ್ಧರಿಸಿದೆ.
ಮಾರ್ಚ್ 7ರಿಂದ 3ದಿನಗಳ ಕಾಲ ದೆಹಲಿಯಲ್ಲಿದ್ದು, ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿ ರಾಜ್ಯದ ಸಮಸ್ಯೆಗಳ ಬಗ್ಗೆ ಹಕ್ಕೊತ್ತಾಯವನ್ನು ಮಂಡಿಸಲಾಗುವುದು ಎಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಶಾಸ್ತ್ರೀಯ ಭಾಷೆಗೆ ಸಂಬಂಧಿಸಿದಂತೆ ಪರಿಣಿತ ಸಮಿತಿಯೊಂದನ್ನು ರಚಿಸಬೇಕು. ಅಗತ್ಯ ಹಣಕಾಸು ನೆರವು ನೀಡಲು ಶೀಘ್ರ ಕ್ರಮಕೈಗೊಳ್ಳಬೇಕು, ಮಹಾಜನ್ ಗಡಿ ವರದಿ ಜಾರಿಗೆ ಹಾಗೂ ಈವರೆಗಿದ್ದ ಎಲ್ಲ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಗುವುದು ಎಂದರು.
ಕಾವೇರಿ, ಕೃಷ್ಣ, ಮಹದಾಯಿ, ಹೊಗೇನಕಲ್ ಯೋಜನೆಗಳ ಕುರಿತಂತೆ ನಿಯೋಗ ಹಕ್ಕೊತ್ತಾಯ ಮಂಡಿಸಿ, ಚರ್ಚೆ ನಡೆಸಲಿದೆ ಎಂದು ಚಂದ್ರು ಹೇಳಿದರು.