ರೈತರ ಸಮಸ್ಯೆ ನಿವಾರಣೆಗೆ ನಮ್ಮಲ್ಲಿ ಮಂತ್ರದಂಡ ಇಲ್ಲ: ಸಿಎಂ
ಬೆಂಗಳೂರು, ಬುಧವಾರ, 20 ಜನವರಿ 2010( 19:44 IST )
PTI
ರೈತರ ಪ್ರತಿಯೊಂದು ಸಮಸ್ಯೆಗಳಿಗೆ ಪರಿಹಾರ ಹುಡುಕುವ ಯಾವುದೇ ಮಂತ್ರದಂಡ ಸರ್ಕಾರದ ಬಳಿ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹತಾಶೆಯ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವಾರು ದಶಕಗಳಿಂದ ರೈತರ ಸಮಸ್ಯೆ ಮುಂದುವರಿದುಕೊಂಡು ಬಂದಿದೆ. ನಮ್ಮ ಸರ್ಕಾರ ಇದುವರೆಗೆ ಯಾವುದೇ ಸರ್ಕಾರ ಕೊಡದೇ ಇರುವಷ್ಟು ಸೌಲಭ್ಯವನ್ನು ರೈತ ಸಮುದಾಯಕ್ಕೆ ಕೊಟ್ಟಿದೆ ಎಂದು ಸಮರ್ಥನೆ ನೀಡಿದರು.
ಹೀಗಾಗಿ ಅವರ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡುವ ಮಂತ್ರದಂಡ ತಮ್ಮ ಬಳಿ ಇಲ್ಲ ಎಂದು ಹೇಳಿದರು. ಸರ್ಕಾರದ ವಿರುದ್ಧ ದಂಗೆ ಎದ್ದಿರುವ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಆಯಾಯ ಜಿಲ್ಲೆಯಲ್ಲಿ ಬರುವ ಸಕ್ಕರೆ ಕಾರ್ಖಾನೆಗಳ ಮಾಲೀಕರೇ ಪರಿಹಾರ ಹುಡುಕಬೇಕು. ಈ ವಿಷಯದಲ್ಲಿ ಸರ್ಕಾರ ಏನೂ ಮಾಡಲು ಸಾಧ್ಯವಿಲ್ಲ. ಇದರಲ್ಲಿ ಸರ್ಕಾರದ ಪಾತ್ರ ಬಹಳ ಕಡಿಮೆ ಇದೆ ಎಂದು ಜಾರಿಕೊಂಡರು.