ನಾನು ಸ್ವ ಇಚ್ಛೆಯಿಂದಲೇ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿರುವುದಾಗಿ ಬುಧವಾರ ಹೈಕೋರ್ಟ್ನಲ್ಲಿ ಶಿವಮೊಗ್ಗದ ಅಶ್ವಿನಿ ಹೇಳಿಕೆ ನೀಡುವ ಮೂಲಕ ತೀವ್ರ ವಿವಾದ ಹುಟ್ಟು ಹಾಕಿದ್ದ ಲವ್ ಜಿಹಾದ್ ಪ್ರಕರಣ ಸುಖಾಂತ್ಯ ಕಂಡಿದೆ.
ಶಿವಮೊಗ್ಗದ ಮುಸ್ಲಿಂ ಧರ್ಮದ ಯುವಕ ಇರ್ಫಾನ್ ಹಾಗೂ ಯುವತಿ ಅಶ್ವಿನಿ(21) ಪ್ರೇಮ ಪ್ರಕರಣ ಲವ್ ಜಿಹಾದ್ ತಿರುವು ಪಡೆದುಕೊಂಡಿತ್ತು. ನ.4ರಿಂದ ನಾಪತ್ತೆಯಾಗಿದ್ದ ತನ್ನ ಮಗಳನ್ನು ಹಾಜರುಪಡಿಸುವಂತೆ ಕೋರಿ ಆಕೆಯ ತಂದೆ ವೈ.ಎಸ್.ಶ್ರೀನಿವಾಸ್ ಅವರು ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ನ್ಯಾಯಾಲಯ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಬುಧವಾರ ಅಶ್ವಿನಿಯನ್ನು ಬುಧವಾರ ಹಾಜರುಪಡಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ.ಶ್ರೀಧರ ರಾವ್ ಮತ್ತು ಸುಭಾಷ್ ಬಿ.ಅಡಿ ಅವರನ್ನೊಳಗೊಂಡ ವಿಭಾಗೀಯ ಪೀಠ, ಪ್ರೇಮ ಪ್ರಕರಣಗಳಲ್ಲಿ ಪ್ರೇಮಿಗಳ ಭವಿಷ್ಯವನ್ನು ಕಾಲವೇ ನಿರ್ಧರಿಸುತ್ತದೆ. ಅದಕ್ಕಿಂತ ಬೇರೆ ನ್ಯಾಯಾಧೀಶ ಇನ್ನೊಂದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.
ಯುವತಿ ವಯಸ್ಕಳಾಗಿರುವ ಕಾರಣ ಹಾಗೂ ಆಕೆ ಸ್ವ ಇಚ್ಛೆಯಿಂದ ವಿವಾಹವಾಗಿರುವ ಕಾರಣ ಅವರಿಬ್ಬರನ್ನು ಬೇರೆ ಮಾಡುವುದು ಸರಿಯಲ್ಲ ಎಂದು ಪೀಠ ತಿಳಿಸಿದ್ದು, ತಂದೆ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.