ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಗದ್ದುಗೆ ಹಿಡಿದ ಅವಧಿಯಲ್ಲಿ ಒಂದಿಂಚು ಜಾಗವನ್ನು ಪರಭಾರೆ ಮಾಡಿಲ್ಲ. ರೈತರಿಗೂ ಅನ್ಯಾಯ ಮಾಡಿಲ್ಲ ಎಂದು ಹೇಳಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಯಾರ ಕಾಲದಲ್ಲಿ ಏನೇನೂ ಆಗಿದೆ ಎಂಬುದರ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ದ ಎಂದರು.
ಶಾಸಕರಿಗಾಗಲೀ, ರಾಜಕಾರಣಿಗಳಿಗಾಗಲೀ ಬೆಂಗಳೂರು ನಗರದ ಒಂದಿಂಚು ಜಾಗವನ್ನು ನೀಡಿಲ್ಲ. ಈ ಬಗ್ಗೆ ಯಾವುದೇ ಚರ್ಚೆಗೆ ಸಿದ್ದ ಎಂದು ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಾಗಲೀ, ಮುಖ್ಯಮಂತ್ರಿ ಯಡಿಯೂರಪ್ಪ ಅವರಾಗಲೀ ಬೆಟ್ಟು ತೋರಿಸುವಂತ ಕೆಲಸ ಮಾಡಿಲ್ಲ ಎಂದು ಹೇಳಿದರು. ನಗರ ಹಾಗೂ ಸುತ್ತಮುತ್ತಲಿರುವ 202 ಕೆರೆಗಳ ಸಂರಕ್ಷಣೆಗೆ ಲಕ್ಷ್ಮಣರಾವ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಯಿತು ಎಂದರು.
ನೈಸ್ ಯೋಜನೆ ವಿರುದ್ಧ ಮಾತ್ರ ಹೋರಾಟ ನಡೆಸಲಾಗುತ್ತಿದೆ ಎಂಬ ಆರೋಪವನ್ನು ನನ್ನ ಮೇಲೆ ಹೊರಿಸಲಾಗುತ್ತಿದೆ. ಇದು ಸರಿಯಲ್ಲ ಎಂದಿರುವ ಗೌಡರು, ಈ ಆರೋಪದಿಂದ ಮುಕ್ತನಾಗಲು ಅನ್ಯಾಯಕ್ಕೆ ಒಳಗಾಗಿರುವ ರೈತರ ವಿರುದ್ಧ ಧ್ವನಿ ಎತ್ತಿ ಹೋರಾಟ ನಡೆಸುವೆ ಎಂದು ಹೇಳಿದರು.