ರಾಜ್ಯದ ಆಡಳಿತರೂಢ ಬಿಜೆಪಿ ಸರ್ಕಾರಕ್ಕೆ ಆಗಾಗ ಕೃತಕ ಪೀಡೆಗಳು ತೊಂದರೆ ನೀಡುತ್ತಿರುವುದಾಗಿ ಗೃಹಸಚಿವ ಡಾ.ವಿ.ಎಸ್.ಆಚಾರ್ಯ ತಿಳಿಸಿದ್ದಾರೆ.
ಅವರು ಗುರುವಾರ ಹೊಳೆನರಸಿಪುರ ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ಶ್ರೀಲಕ್ಷ್ಮೀವೆಂಕಟರಮಣ ಸ್ವಾಮಿ ದೇವಸ್ಥಾನದ ರಾಜಗೋಪುರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದ ಗದ್ದುಗೆ ಏರಿದಾಗಿನಿಂದ ಒಂದಲ್ಲ ಒಂದು ಕೃತಕ ಪೀಡೆಗಳು ತೊಂದರೆ ಕೊಡುತ್ತಿದ್ದು, ಇದರಲ್ಲಿ ರೈತರ ಹೆಸರಿನ ಪೀಡೆ ಸಹ ಸೇರಿಕೊಂಡಿದ್ದು, ಇದನ್ನು ಎದುರಿಸುವ ಶಕ್ತಿ ರಾಜ್ಯ ಸರ್ಕಾರಕ್ಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೈಸ್ ರಸ್ತೆ ಯಾರ ಕಾಲದಲ್ಲಿ ಆಗಿದೆ, ಈಗ ನೈಸ್ ಬಗ್ಗೆ ಹೋರಾಟ ಮಾಡುತ್ತಿರುವುದು ಸೂಕ್ತ ಅಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೆಸರು ಹೇಳದೆ ಪರೋಕ್ಷವಾಗಿ ಟೀಕಿಸಿದರು.
ರಾಜ್ಯದ ಬಿಜೆಪಿಯ ನೂತನ ಅಧ್ಯಕ್ಷರಾಗಿ ಈಶ್ವರಪ್ಪ ಆಯ್ಕೆ ಸೂಕ್ತವಾಗಿದೆ. ಅವರು ಅಧ್ಯಕ್ಷರಾಗುವುದನ್ನು ನಾನು ಸ್ವಾಗತಿಸುತ್ತೇನೆ ಎಂದು ಆಚಾರ್ಯ ಈ ಸಂದರ್ಭದಲ್ಲಿ ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷರಾಗುವವರು ಹೆಚ್ಚಿನ ಸಂಘಟನೆ ಮಾಡುವ ಕೆಲಸ ಆಗಬೇಕಾಗಿರುವುದರಿಂದ ಈಶ್ವರಪ್ಪ ಸೂಕ್ತ ವ್ಯಕ್ತಿ ಎಂಬುದು ತನ್ನ ವೈಯಕ್ತಿಕ ಅಭಿಪ್ರಾಯ ಎಂದರು.