ಬಿಬಿಎಂಪಿ ರಾತ್ರೋರಾತ್ರಿ ಬಹುಕೋಟಿ ಯೋಜನೆಯ ಟೆಂಡರ್ ಪ್ರಕರಣ ಪ್ರಕ್ರಿಯೆ ನಡೆಸಿದ ಪ್ರಕರಣದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರದ ಅನುಮೋದನೆ ಕುರಿತ ದಾಖಲೆಯನ್ನು ಹಾಜರುಪಡಿಸುವಂತೆ ಸರ್ಕಾರ ಮತ್ತು ಹೈಕೋರ್ಟ್ಗೆ ಸೂಚಿಸಿದೆ.
ಬಿಬಿಎಂಪಿ ಕತ್ತಲೆಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿ ಕಾನೂನು ಉಲ್ಲಂಘಿಸಿರುವುದಾಗಿ ಮಾಜಿ ಮೇಯರ್ ಸಿ.ಆರ್.ರಮೇಶ್ ಹೈಕೋರ್ಟ್ಗೆ ದೂರು ಸಲ್ಲಿಸಿದ್ದರು. ಗುರುವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗೋಪಾಲಗೌಡ ನೇತೃತ್ವದ ವಿಭಾಗೀಯ ಪೀಠ, ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.
ಇತ್ತೀಚೆಗಷ್ಟೇ ಬಿಬಿಎಂಪಿಯಲ್ಲಿ ಸುಮಾರು 3,500ಕೋಟಿ ರೂಪಾಯಿ ವೆಚ್ಚದ ಟೆಂಡರ್ ಪ್ರಕ್ರಿಯೆಯನ್ನು ರಾತ್ರಿ ನಡೆಸಿರುವುದಕ್ಕೆ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಅಲ್ಲದೇ, ಪಾಲಿಕೆಯ ಮಾಜಿ ಮೇಯರ್ ರಮೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಲೋಕಾಯುಕ್ತಕ್ಕೆ ದೂರು: ಬಿಬಿಎಂಪಿ ರಾತ್ರಿ ಸಮಯದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿದ ಪ್ರಕರಣದ ಕುರಿತು ಲೋಕಾಯುಕ್ತರಿಗೆ ದೂರು ನೀಡಿರುವುದಾಗಿ ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತ ತಿಳಿಸಿದ್ದಾರೆ. ಈ ಮೊದಲೇ ಬಿಬಿಎಂಪಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತಾದರು ಕೂಡ, ಅದು ಕ್ರಮಬದ್ಧವಾಗಿಲ್ಲದ ಕಾರಣ ಗುರುವಾರ ಮತ್ತೆ ದೂರು ನೀಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.