ಅಲ್ಪಸಂಖ್ಯಾತರಿಗೆ ಅನ್ಯಾಯ:ಅನ್ಸಾರಿಯೂ ಜೆಡಿಎಸ್ಗೆ ಗುಡ್ ಬೈ
ಬೆಂಗಳೂರು, ಶುಕ್ರವಾರ, 22 ಜನವರಿ 2010( 17:57 IST )
ಜೆಡಿಎಸ್ನಲ್ಲಿ ಯಾರಿಗೂ ಉಳಿಗಾಲವಿಲ್ಲ ಎಂದು ಹೇಳಿ ಪಕ್ಷದ ಮೇಲ್ಮನೆ ಸದಸ್ಯರಾದ ತಿಪ್ಪಣ್ಣ ಮತ್ತು ಗುರುದೇವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕೂಡ ಅಪಸ್ವರ ಎತ್ತುವ ಮೂಲಕ ಪಕ್ಷಕ್ಕೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ.
ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ತಿಪ್ಪಣ್ಣ ಹಾಗೂ ಗುರುದೇವ್ ಅವರು ಪಕ್ಷ ತೊರೆದು ಹೋಗಿರುವುದರಿಂದ ಯಾವುದೇ ನಷ್ಟ ಇಲ್ಲ ಎಂದು ಪ್ರತಿಕ್ರಿಯೆ ನೀಡುತ್ತ ನನ್ನ ಹೆಸರನ್ನೂ ಸೇರಿಸಿದ್ದಾರೆ. ಗೌಡರ ಹೇಳಿಕೆಯಿಂದ ನನ್ನ ಮನಸ್ಸಿಗೆ ನೋವಾಗಿದೆ.ಅಲ್ಲದೆ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದರಿಂದ ಅಸಮಾಧಾನಗೊಂಡಿರುವ ಅವರು ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.
ಪಕ್ಷದ ವಿಚಾರ, ನೈಸ್ ವಿಚಾರದಲ್ಲಿ ನಡೆದುಕೊಂಡ ರೀತಿ ಹಾಗೂ ಅಲ್ಪಸಂಖ್ಯಾತರಿಗೆ ಜೆಡಿಎಸ್ನಲ್ಲಿ ಉಸಿರಾಡಲು ಸಾಧ್ಯವಿಲ್ಲದಂತಹ ವಾತಾವರಣ ಇರುವುದರಿಂದ ಪಕ್ಷ ತೊರೆಯುತ್ತಿದ್ದೇನೆ ಎಂದು ಅನ್ಸಾರಿ ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಕುಟುಂಬ ಏಕಪಕ್ಷೀಯ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದೆ. ಪಕ್ಷದ ಕಾರ್ಯಾಧ್ಯಕ್ಷ ಸ್ಥಾನದಿಂದ ನನ್ನನ್ನು ಪದಚ್ಯುತಗೊಳಿಸಿ, ಆ ಸ್ಥಾನವನ್ನು ಸಿಂಧ್ಯ ಅವರಿಗೆ ನೀಡಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋಗೋರು ಹೋಗ್ಲಿ-ದೇವೇಗೌಡ: ಪಕ್ಷ ಬಿಟ್ಟು ಹೋಗೋರು ಹೋಗ್ಲಿ ಅದರಿಂದ ನಮಗೇನೂ ನಷ್ಟವಿಲ್ಲ ಎಂದು ಜೆಡಿಎಸ್ ವರಿಷ್ಠ ದೇವೇಗೌಡರು, ಅನ್ಸಾರಿ ಪಕ್ಷ ತೊರೆಯುವ ಕುರಿತು ಈ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅನ್ಸಾರಿಗೆ ಎಲ್ಲಾ ಹಂತದಲ್ಲಿಯೂ ಪಕ್ಷದಲ್ಲಿ ಉತ್ತಮ ಸ್ಥಾನಮಾನ ನೀಡಲಾಗಿತ್ತು. ನಾವೇನು ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿಲ್ಲ ಎಂದು ಸಮಜಾಯಿಷಿ ನೀಡಿದರು.