ಬದಲಾಗುತ್ತಿರುವ ಪರಿಸ್ಥಿತಿಗೆ ಅನುಗುಣವಾಗಿ ಹೆಚ್ಚಿನ ಆದಾಯ ತರುವ ರೀತಿಯಲ್ಲಿ ಇತರೆ ಕಸುಬುಗಳನ್ನು ರೈತರ ಅನುಕೂಲಕ್ಕೆ ತಕ್ಕಂತೆ ಬಳಕೆ ಮಾಡಿದಲ್ಲಿ ಕೃಷಿ ಇನ್ನಷ್ಟು ದಿನ ಉಳಿಯಲು ಸಾಧ್ಯವಾಗುತ್ತದೆ ಎಂದು ಶಾಸಕ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ನಗರ ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಚಿಕ್ಕಜಾಲ ಗ್ರಾಮ ಪಂಚಾಯಿತಿ ಇವರ ಸಂಯುಕ್ತ ಆಶ್ರಯದಲ್ಲಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತರಬನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಪಶು ಆರೋಗ್ಯ ಶಿಬಿರ ಹಾಗೂ ಮಿಶ್ರತಳಿ ಹಸು ಮತ್ತು ಕರುಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ರೈತರು ಕೂಡ ರಾಸಾಯನಿಕ ಗೊಬ್ಬರಗಳನ್ನು ಬಳಸದೆ, ತಾವೇ ಸ್ವತಃ ಗ್ರಾಮೀಣವಾಗಿ ತಯಾರಿಸುವ ಗೊಬ್ಬರವನ್ನೇ ಉಪಯೋಗಿಸಿ ಬೆಳೆಯನ್ನು ಬೆಳೆಯಬೇಕು. ಆದರೆ ಇತ್ತೀಚೆಗೆ ರೈತರು ಜಾಗತೀಕರಣದ ಪ್ರಭಾವ ಎಂಬಂತೆ ಆಧುನಿಕತೆಗೆ ಮಾರು ಹೋಗಿರುವುದರಿಂದ ಕೃಷಿಯಲ್ಲಿ ನಷ್ಟ ಅನುಭವಿಸುವಂತಹ ಪರಿಸ್ಥಿತಿ ಉದ್ಭವವಾಗಿದೆ ಎಂದು ವಿಶ್ಲೇಷಿಸಿದರು.