ಒಂದೆಡೆ ಜೆಡಿಎಸ್ನಲ್ಲಿ ಉಳಿಗಾಲವಿಲ್ಲ ಎಂದು ಅಸಮಾಧಾನಗೊಂಡ ಪಕ್ಷದ ಮುಖಂಡರು ಗುಡ್ ಬೈ ಹೇಳಿದ್ದು, ಮತ್ತೊಂದೆಡೆ ಉಚ್ಛಾಟಿತ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಗೆ ಗುಡ್ ಬೈ ಹೇಳಿ ಜೆಡಿಎಸ್ ಪಾಳಯ ಸೇರಿದ್ದಾರೆ.
ಶುಕ್ರವಾರ ಮಧ್ನಾಹ್ನ ಬಿಜಾಪುರದಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ನೂರಾರು ಬೆಂಬಲಿಗರೊಂದಿಗೆ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಶನಿ ಕಾಟ ತಪ್ತು- ಬಿಜೆಪಿ: ಭಾರತೀಯ ಜನತಾ ಪಕ್ಷಕ್ಕೆ ಗುಡ್ ಬೈ ಹೇಳಿ ಜೆಡಿಎಸ್ ಸೇರ್ಪಡೆಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರಿಂದಾಗಿ ಬಿಜೆಪಿ ಪಕ್ಷಕ್ಕೆ ಅಂಟಿಕೊಂಡಿದ್ದ ಶನಿ ಕಾಟ ತಪ್ಪಿದಂತಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಶುಕ್ರವಾರ ಹೋಮ-ಹವನ ನಡೆಸಿದ ಕುತೂಹಲಕಾರಿ ಘಟನೆ ನಡೆಯಿತು.
ಯತ್ನಾಳ್ ಅವರ ನಿರ್ಗಮನದಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ. ಅದರಿಂದಾಗಿ ಪಕ್ಷಕ್ಕೆ ತಗುಲಿದ್ದ ಶನಿಕಾಟ ತಪ್ಪಿದೆ ಎಂದು ಪಕ್ಷದ ಶುದ್ಧಿಗಾಗಿ ಹೋಮ-ಹವನ ನಡೆಸಿದರು.
ಜೆಡಿಎಸ್ ಸಂಭ್ರಮ: ಬಿಜೆಪಿಗೆ ಗುಡ್ ಬೈ ಹೇಳಿರುವ ಯತ್ನಾಳ್ ಜೆಡಿಎಸ್ಗೆ ಸೇರ್ಪಡೆಗೊಂಡಿರುವುದಕ್ಕೆ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದರು.