ಕಳೆದ ಲೋಕಸಭಾ ಚುನಾವಣಾ ವೇಳೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸೇರಿದಂತೆ ಮಾಜಿ ಸಂಸದ ಎಸ್.ಬಂಗಾರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ವಿರುದ್ಧ ದಾಖಲಾಗಿದ್ದ ಪ್ರಕರಣದಿಂದ ಕೋರ್ಟ್ ಅವರನ್ನು ಮುಕ್ತಗೊಳಿಸಿದೆ.
ಜನತಾ ಪ್ರಾತಿನಿಧ್ಯ ಕಾಯ್ದೆ ಹಾಗೂ ಕರ್ನಾಟಕ ರಾಜ್ಯ ಮುಕ್ತ ಪ್ರದೇಶ ನೈರ್ಮಲ್ಯ ಕಾಯ್ದೆಯಡಿ ಈ ಇಬ್ಬರು ಮುಖಂಡರ ವಿರುದ್ಧ ಪ್ರತ್ಯೇಕವಾಗಿ ಇಲ್ಲಿನ ನ್ಯೂ ಟೌನ್ ಹಾಗೂ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಕುರಿತು ಇಬ್ಬರೂ ನ್ಯಾಯಾಲಯಕ್ಕೆ ಗೈರುಹಾಜರಾದ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧವೂ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಆದರೆ ದೂರು ದಾಖಲು ಮಾಡಿದ್ದ ಎರಡು ಠಾಣೆಯ ಅಧಿಕಾರಿಗಳು ಹೆಚ್ಚುವರಿ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಘಟನೆಯಲ್ಲಿ ಇಬ್ಬರು ಮುಖಂಡರ ನೇರ ಪಾತ್ರ ಕಂಡು ಬಂದಿಲ್ಲ. ಈ ನೆಲೆಯಲ್ಲಿ ಅವರನ್ನು ಪ್ರಕರಣದಿಂದ ಕೈಬಿಡುವಂತೆ ಮನವಿ ಮಾಡಿದ್ದರು.
ನ್ಯೂಟೌನ್ ಠಾಣೆ ಪ್ರಕರಣ ಕುರಿತು ಗುರುವಾರ ವಿಚಾರಣೆ ನಡೆಸಿದ ನ್ಯಾಯಾಧೀಶರು, ಪೊಲೀಸರು ಸಲ್ಲಿಸಿದ್ದ ಹೆಚ್ಚುವರಿ ಆರೋಪಪಟ್ಟಿಯನ್ನು ಮಾನ್ಯ ಮಾಡಿ, ಇಬ್ಬರನ್ನೂ ಪ್ರಕರಣದಿಂದ ಮುಕ್ತಗೊಳಿಸಿ ತೀರ್ಪು ನೀಡಿದರು.