ಪ್ರಸಕ್ತ ಆರ್ಥಿಕ ವರ್ಷದ ಬಜೆಟ್ ಅಧಿವೇಶನವನ್ನು ಮಾರ್ಚ್ ಮೊದಲ ವಾರದಲ್ಲಿ ನಡೆಸುವ ಸಾಧ್ಯತೆ ಇದೆ ಎಂದು ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ ತಿಳಿಸಿದ್ದಾರೆ.
ಹೊಳೆನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನದ ದಿನಾಂಕವನ್ನು ಇನ್ನೂ ನಿರ್ಧಾರ ಮಾಡಿಲ್ಲ ಎಂದರು. ಕೇಂದ್ರದ ಬಜೆಟ್ ಬಳಿಕ ರಾಜ್ಯದ ಬಜೆಟ್ ಮಂಡಿಸುವುದು ಸಂಪ್ರದಾಯ. ಕೇಂದ್ರದ ಬಜೆಟ್ ಫೆಬ್ರುವರಿ ಕೊನೆಯ ವಾರ ಮಂಡನೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಮೊದಲೇ ರಾಜ್ಯ ಬಜೆಟ್ ಮಂಡಿಸಿದರೆ ಕೇಂದ್ರ ಯಾವ ಬಾಬ್ತಿನಲ್ಲಿ ಏನೇನು ನೆರವು ನೀಡುತ್ತದೆ, ಯಾವುದಕ್ಕೆ ಕೊರತೆ ಬೀಳುತ್ತದೆ ಎನ್ನುವುದು ತಿಳಿಯುವುದಿಲ್ಲ. ಆ ಕಾರಣ, ಕೇಂದ್ರದ ಬಜೆಟ್ ಮುನ್ನ ರಾಜ್ಯ ಬಜೆಟ್ ಮಂಡಿಸುವುದಿಲ್ಲ ಎಂದು ತಿಳಿಸಿದರು.