ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಲಿರುವ ಸಾವಿರಾರು ಆಕಾಂಕ್ಷಿಗಳ ಸ್ಥಿತಿ ಇದೀಗ ತೂಗುಯ್ಯಾಲೆಯಲ್ಲಿದೆ. ಶುಕ್ರವಾರ ಇತ್ಯರ್ಥವಾಗಬೇಕಿದ್ದ ವಾರ್ಡ್ವಾರು ಮೀಸಲಾತಿ ವಿವಾದದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜನವರಿ 27ಕ್ಕೆ ಮುಂದೂಡಿರುವ ಹಿನ್ನೆಲೆಯಲ್ಲಿ ಚುನಾವಣಾ ಬಿಕ್ಕಟ್ಟು ಮತ್ತಷ್ಟು ಕಗ್ಗಂಟಾದಂತಾಗಿದೆ.
ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ 2 ಬಾರಿ ವಿಚಾರಣೆ ಮುಂದೂಡಲ್ಪಟ್ಟಿದ್ದು, ಆ ನಿಟ್ಟಿನಲ್ಲಿ 27ರಂದು ಸುಪ್ರೀಂಕೋರ್ಟ್ ತಳೆಯುವ ನಿಲುವು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಬಿಬಿಎಂಪಿ ಚುನಾವಣೆಗಾಗಿ ನೀತಿ ಸಂಹಿತೆ ಜಾರಿಯಾಗಿದೆಯೇ ಹೊರತು ಚುನಾವಣಾ ಅಧಿಸೂಚನೆ ಇನ್ನೂ ಹೊರ ಬಿದ್ದಿಲ್ಲ. ಫೆಬ್ರುವರಿ 1ರಂದು ಅಧಿಸೂಚನೆ ಪ್ರಕಟವಾಗಲಿದ್ದು, ವೇಳಾಪಟ್ಟಿ ಹೊರಬಿದ್ದಿದೆ ಎಂಬ ಕಾರಣಕ್ಕಾಗಿ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯವ್ಯಕ್ತಪಡಿಸಿದೆ.
ಮೀಸಲಾತಿ ಪಟ್ಟಿ ಕುರಿತಂತೆ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತ್ತು. ಈ ತಡೆಯಾಜ್ಞೆಯನ್ನು ತೆರವುಗೊಳಿಸಲು ಇಂದು ಸುಪ್ರೀಂಪೀಠ ನಿರಾಕರಿಸಿತು. ಸುಪ್ರೀಂಕೋರ್ಟ್ನಲ್ಲಿ ನಡೆದ ಬೆಳವಣಿಗೆ ಈಗಾಗಲೇ ನಿಗದಿಯಾಗಿರುವಂತೆ ಫೆ.21ರಂದು ಚುನಾವಣೆ ನಡೆಯಲಿದೆಯೇ ಎಂಬ ಸಂಶಯ ವ್ಯಕ್ತವಾಗಿದೆ.