ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಂತ್ರಸ್ತರಿಗೆ ಸ್ಪಂದಿಸಿದ್ದೇವೆ, ಉತ್ಸವ ಮುಂದೂಡಿಕೆಯಿಲ್ಲ: ರೆಡ್ಡಿ
(HD Revanna | Janardhana Reddy | Karnataka | Hampi Srikrishnadevaraya)
ಸಂತ್ರಸ್ತರಿಗೆ ಸ್ಪಂದಿಸಿದ್ದೇವೆ, ಉತ್ಸವ ಮುಂದೂಡಿಕೆಯಿಲ್ಲ: ರೆಡ್ಡಿ
ಬೆಂಗಳೂರು, ಭಾನುವಾರ, 24 ಜನವರಿ 2010( 13:54 IST )
NRB
ರಾಜ್ಯದಲ್ಲಿ ನೆರೆ ಹಾವಳಿಯಿಂದ ಸಂತ್ರಸ್ತವಾಗಿರುವ ಪ್ರದೇಶದಲ್ಲಿ ಪುನರ್ವಸತಿ ಕಾರ್ಯಕ್ಕೆ ಬಿಜೆಪಿ ಸರಕಾರ ಹೆಚ್ಚಿನ ಆದ್ಯತೆ ನೀಡಿರುವುದರಿಂದ ಹಂಪಿಯ ಶ್ರೀಕೃಷ್ಣದೇವರಾಯರ ಪಟ್ಟಾಭಿಷೇಕದ ಉತ್ಸವ ಆಚರಣೆ ಮುಂದೂಡುವುದರಲ್ಲಿ ಅರ್ಥವಿಲ್ಲ ಎಂದು ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ನೆರೆ ಪ್ರದೇಶದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿ ಕೋಟ್ಯಂತರ ರೂಪಾಯಿ ದುಂದು ವೆಚ್ಚ ಮಾಡಲಾಗುತ್ತಿದೆ ಎಂಬ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನೆರೆ ಹಾವಳಿಯಿಂದ ತೊಂದರೆಗೆ ಒಳಗಾದ ಪ್ರದೇಶಗಳಲ್ಲಿ ತ್ವರಿತ ಗತಿಯಲ್ಲಿ ಪುನರ್ವಸತಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಬಡಾವಣೆ ನಿರ್ಮಿಸಲಾಗಿದ್ದು, ಅಲ್ಲಿ ಮನೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಎಂದರು.
ಗಣಿ ಮಾಲೀಕರ ಮುಖಾಂತರವೇ ಬಳ್ಳಾರಿ, ಬಾಗಲಕೋಟೆ, ಬಿಜಾಪುರ ಮತ್ತಿತರ ಜಿಲ್ಲೆಗಳಲ್ಲಿ ತಲಾ 1.25 ಲಕ್ಷ ರೂ. ವೆಚ್ಚದಲ್ಲಿ ಮನೆಗಳ ನಿರ್ಮಾಣ ಮಾಡಿಕೊಡಲಾಗುತ್ತಿದೆ. ಇದನ್ನು ರೇವಣ್ಣ ಬಂದು ಪರೀಶೀಲಿಸಲಿ ಎಂದು ಸವಾಲು ಹಾಕಿದರು.