ಈಶ್ವರಪ್ಪನವರು ರಾಜ್ಯ ಬಿಜೆಪಿ ಅಧ್ಯಕ್ಷರಾದರೆ ಸರಕಾರ ಪತನವಾಗುತ್ತದೆ ಎಂದಿರುವ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿಕೆಯನ್ನು ಹಾಸ್ಯಾಸ್ಪದ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದ ಗೌಡ, ಜ್ಯೋತಿಷಿಗಳ ಕೆಲಸವನ್ನು ಕಾಂಗ್ರೆಸ್ ಮುಖಂಡ ಆರಂಭಿಸಿದ್ದು ಯಾವಾಗ ಎಂದು ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡುತ್ತಿದ್ದ ಅವರು, ಇದು ಸಿದ್ಧರಾಮಯ್ಯ ಅವರ ಹತಾಶೆಯನ್ನಷ್ಟೇ ಬಿಂಬಿಸುತ್ತಿದೆ ಹೊರತು ಮತ್ತಿನ್ನೇನಲ್ಲ; ಇದು ಸಂಪೂರ್ಣ ಹಾಸ್ಯಾಸ್ಪದ ಹೇಳಿಕೆಯಾಗಿದೆ ಎಂದರು.
NRB
ತನ್ನ ಸಮುದಾಯದಲ್ಲಿ ತಾನೊಬ್ಬನೇ ನಾಯಕ ಎಂದು ಬೊಬ್ಬೆ ಹಾಕುತ್ತಿದ್ದ ಸಿದ್ಧರಾಮಯ್ಯನವರಿಗೆ ಈಶ್ವರಪ್ಪನವರು ಬಿಜೆಪಿ ಅಧ್ಯಕ್ಷರಾಗುತ್ತಾರೆ ಎಂದಾಗ ದಿಗ್ಭ್ರಮೆಯಾಗಿದೆ. ತನಗೆ ಕುರುಬ ಸಮುದಾಯದಲ್ಲಿ ಬೆಲೆ ಕಡಿಮೆಯಾಗಬಹುದು ಎಂಬ ಭೀತಿಯಿಂದಾಗಿ ಅವರು ಕಂಗಾಲಾಗಿದ್ದು, ಇದೀ ನಿಟ್ಟಿನಲ್ಲಿ ಹಾಸ್ಯಾಸ್ಪದ ಹೇಳಿಕೆಗಳನ್ನು ಅವರು ನೀಡುತ್ತಿದ್ದಾರೆ ಎಂದು ಡೀವಿ ಲೇವಡಿ ಮಾಡಿದ್ದಾರೆ.
ಕುರುಬರ ನಾಯಕನೆಂದು ಹೇಳಿಕೊಳ್ಳುತ್ತಿರುವ ಸಿದ್ಧರಾಮಯ್ಯನವರಿಗೆ ಈಶ್ವರಪ್ಪನವರ ಏಳ್ಗೆ ಸಹಿಸಲಾಗುತ್ತಿಲ್ಲ. ಮುಂದಿನ ಚುನಾವಣೆಗಳಲ್ಲಿ ನೆಲ ಕಚ್ಚುವ ಭೀತಿಯೂ ಎದುರಿಗಿರುವುದರಿಂದ ಇಂತಹ ಹೇಳಿಕೆಗಳು ಸಾಮಾನ್ಯ ಎಂದರು.
ಇಂಧನ ಸಚಿವ ಈಶ್ವರಪ್ಪ ಕೇವಲ ಆಶ್ವಾಸನೆಗಳನ್ನು ನೀಡುವ ವ್ಯಕ್ತಿ, ಮುಂಗೋಪ ಸ್ವಭಾವ ಹೊಂದಿರುವ ಅವರಿಗೆ ಪಕ್ಷ ಸಂಘಟನೆ ಮಾಡುವ ವರ್ಚಸ್ಸು ಇಲ್ಲ. ಆ ನಿಟ್ಟಿನಲ್ಲಿ ಈಶ್ವರಪ್ಪ ಪಕ್ಷದ ರಾಜ್ಯಾಧ್ಯಕ್ಷರಾದರೆ ಸರ್ಕಾರ ಪತನಗೊಳ್ಳುವುದು ನಿಶ್ಚಿತ ಎಂದು ಕೆಲ ದಿನಗಳ ಹಿಂದೆ ಸಿದ್ದರಾಮಯ್ಯ ಲೇವಡಿ ಮಾಡಿದ್ದರು.
ಇದಕ್ಕೆ ಸ್ವತಃ ಪ್ರತಿಕ್ರಿಯಿಸಿದ್ದ ಈಶ್ವರಪ್ಪ, ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಮೇಲೆ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳಬೇಕು ಮತ್ತು ಬಾಯಿಗೆ ಬಂದಂತೆ ಮಾತನಾಡುವುದು ನಿಲ್ಲಿಸಬೇಕು ಎಂದು ತಿರುಗೇಟು ನೀಡಿದ್ದರು.