ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಜನರ ಸಂಕಷ್ಟಗಳನ್ನು ಆಲಿಸಲು ಪುರುಸೊತ್ತಿಲ್ಲ, ಆದರೆ ತ್ರಿ ಈಡಿಯಟ್, ಅಮಿತಾಬ್ ನಟನೆಯ ಪಾ ಸಿನಿಮಾ ನೋಡಲು ಸಮಯ ಇದೆಯಾ?ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಸಯ್ಯದ್ ಮುಜೀಬ್ ಅವರು ಪ್ರಶ್ನಿಸಿದ್ದಾರೆ.
ಭಾನುವಾರ ನಡೆದ ಜಿಲ್ಲಾ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ತರಾಟೆಗೆ ತೆಗೆದುಕೊಂಡ ಅವರು,ಉತ್ತರ ಕರ್ನಾಟಕ ಭಾಗದ ಜನ ಪ್ರವಾಹದಿಂದ ತತ್ತರಿಸಿಹೋಗಿದ್ದಾರೆ. ಅವರಿಗೆ ಪರಿಹಾರ ನೀಡಲು ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ. ಆದರೆ, ಅಮಿತಾಬ್ ಅವರ ಚಿತ್ರಕ್ಕೆ ಶೇ.50ರಷ್ಟು ರಿಯಾಯ್ತಿ ನೀಡಲು ಹಣ ಇದೆಯಾ? ಇಂತಹ ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ಪ್ರಶ್ನಿಸಬೇಕಾಗಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದಾಗಿ ದೂರಿದರು. ಸರ್ಕಾರಗಳು ಕಾರ್ಮಿಕರ, ರೈತರ ಹಿತಕಾಪಾಡುವುದನ್ನು ಬಿಟ್ಟು, ಎನ್ಜಿಓಗಳಿಗೆ ಹಣ ಮಾಡಿಕೊಳ್ಳಲು ದಾರಿ ಮಾಡಿಕೊಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚಿನ ಸರ್ಕಾರಗಳು ಮತ್ತು ಅಧಿಕಾರಶಾಹಿಗಳು ಕಾರ್ಮಿಕರ ಹಕ್ಕುಗಳ ಮೇಲೆ ನಡೆಯುತ್ತಿರುವ ದಾಳಿ ಖಂಡಿಸಿ ದೇಶದ 9ಪ್ರಮುಖ ಕಾರ್ಮಿಕ ಸಂಘಟನೆಗಳು ಮಾ.5ರಂದು ದೇಶವ್ಯಾಪಿ ಜೈಲ್ ಭರೋ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಹೇಳಿದರು.