ಹೊಟ್ಟೆಗೆ ಅನ್ನ ಕೊಡುವ ರೈತ ಹಾಗೂ ಮಾನ ಮುಚ್ಚಲು ಬಟ್ಟೆ ನೀಡುವ ನೇಕಾರರು ದೇಶದ ಎರಡು ಕಣ್ಣುಗಳಿದ್ದಂತೆ. ಅವರ ಏಳಿಗೆಗಾಗಿ ಶ್ರಮಿಸುವುದು ಸರ್ಕಾರದ ಕರ್ತವ್ಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಇಲ್ಲಿನ ಕೆಂಪಲಿಂಗನಹಳ್ಳಿ ಬಳಿ ಭಾನುವಾರ ರಾಜ್ಯ ನೇಕಾರರ ಸಂಘ ಆಯೋಜಿಸಿದ್ದ ನೇಕಾರರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಯಡಿಯೂರಪ್ಪ ಮಾತನಾಡಿದರು.
ಸಮುದಾಯದ ಸಬಲೀಕರಣ ಹಾಗೂ ಸವಲತ್ತುಗಳನ್ನು ಪಡೆಯಲು ಇಂತಹ ಒಗ್ಗಟ್ಟಿನ ಜಾಗೃತಿ ಸಮಾವೇಶ ಪೂರಕವಾಗಲಿದೆ ಎಂದರು. ಈಗಾಗಲೇ ಸಂಘದ ಹತ್ತಾರು ಬೇಡಿಕೆಗಳನ್ನು ಈಡೇರಿಸಿದ್ದು, ಇನ್ನುಳಿದ ಬೇಡಿಕೆಗಳನ್ನು ರಾಜ್ಯದ ಹಣಕಾಸು ಪರಿಸ್ಥಿತಿ ಗಮನಿಸಿ ಮುಖಂಡರೊಂದಿಗೆ ಚರ್ಚಿಸಿ ಇತ್ಯರ್ಥ ಪಡಿಸುವುದಾಗಿ ಭರವಸೆ ನೀಡಿದರು.
ಚುನಾವಣೆ ವೇಳೆ ಪೊಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬರುವುದು ಕಷ್ಟ. ಜನರು ರಾಜಕೀಯ, ಆರ್ಥಿಕ, ಶೈಕ್ಷಣಿಕವಾಗಿ ಬೆಳೆದಿದ್ದು, ಒಂದೂವರೆ ವರ್ಷದ ಅವಧಿಯಲ್ಲಿ ಹಲವು ಅಡಚಣೆಗಳನ್ನು ಸಹಿಸಿದ್ದರೂ ಉತ್ತಮ ಆಡಳಿತ ನೀಡಿದ ವಿಶ್ವಾಸ ತಮಗಿದೆ ಎಂದರು.