ಸಾಮಾಜಿಕ ಸಮಸ್ಯೆಗಳನ್ನು ಕೇವಲ ಕಾನೂನಿನಿಂದ ಮಾತ್ರ ಬಗೆಹರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟಿದ್ದಾರೆ.
ಸಿವಿಲ್ ಸೊಸೈಟಿ ಆಫ್ ಇಂಡಿಯಾದ ಸದಸ್ಯರು ನಗರದಲ್ಲಿ ಆಯೋಜಿಸಿದ್ದ ನಾಗರಿಕ ಸಮಾಜ ಕುರಿತ ಮೂರು ದಿನಗಳ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಸಮಸ್ಯೆಗಳನ್ನು ತೊಡೆದು ಹಾಕುವಲ್ಲಿ ನಾಗರಿಕ ಸಮಾಜ ಮುಖ್ಯ ಪಾತ್ರ ವಹಿಸಬೇಕು. ಪ್ರತಿಯೊಂದನ್ನೂ ಕಾನೂನಿನ ಮೂಲಕ ಸರಿಪಡಿಸಲು ಅಸಾಧ್ಯ. ನಾಗರಿಕ ಸಮಾಜ ಬದ್ಧತೆಯಿಂದ ಕೆಲಸ ಮಾಡಬೇಕಿದ್ದು, ಅದರ ಮೇಲೆ ದೊಡ್ಡ ಹೊಣೆಗಾರಿಕೆಯಿದೆ ಎಂದು ಹೇಳಿದರು.
ಮಾಹಿತಿ ಹಕ್ಕು ಕಾಯಿದೆ ಜಾರಿಯಿಂದ ಹಕ್ಕು ಪ್ರತಿಪಾದಿಸಲು ಅವಕಾಶವಿದೆ. ಕೇಂದ್ರವು ಸಮಾಜದ ಎಲ್ಲಾ ವರ್ಗಗಳ ಜನರ ಅಭಿವೃದ್ದಿಗೆ ಪೂರಕ ಕಾರ್ಯಕ್ರಮ ಜಾರಿಗೊಳಿಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ವಿಶ್ವಾಸವಿದ್ದಲ್ಲಿ ಮಾತ್ರ ಆಡಳಿತ ಯಶಸ್ಸು ಕಾಣಲು ಸಾಧ್ಯ. ಸಾಮಾಜಿಕ, ಶೈಕ್ಷಣಿಕ ನ್ಯಾಯಕ್ಕಾಗಿ ಹಂಬಲಿಸುತ್ತಿರುವ ಜನರಿಗೆ ಇಂಥ ಸಮ್ಮೇಳನಗಳು, ಚಳವಳಿಗಳಿಂದ ಪ್ರಯೋಜನವಿದೆ ಎಂದರು.