ಜಾತ್ಯತೀತ ನಿಲುವಿನ ಕಾಂಗ್ರೆಸ್ ಪಕ್ಷವೇ ಅಹಿಂದ: ವಿಶ್ವನಾಥ್
ತುಮಕೂರು, ಸೋಮವಾರ, 25 ಜನವರಿ 2010( 18:27 IST )
ಕಾಂಗ್ರೆಸ್ ಮುಖಂಡರಾಗಿರುವ ಸಿದ್ದರಾಮಯ್ಯ ಅಹಿಂದ ಸ್ಥಾಪಕರಲ್ಲ ಎಂದಿರುವ ಸಂಸದ ಎಚ್.ವಿಶ್ವನಾಥ್ ಕಾಂಗ್ರೆಸ್ ಪಕ್ಷವೇ ಅಹಿಂದ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಅವರು ಸಿದ್ದಗಂಗಾ ಮಹಿಳಾ ಕಾಲೇಜಿನಲ್ಲಿ ಭೂಮಿ ಬಳಗ ಆಯೋಜಿಸಿದ್ದ ಮತ ಸಂತೆ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.
ಯಾವ ಪಕ್ಷ ಜಾತ್ಯತೀತ ತತ್ವ ಪಾಲಿಸುತ್ತದೋ ಅದೇ ಅಹಿಂದ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಹಿಂದ ಸ್ಥಾಪಕರಲ್ಲ, ಡಾ.ದ್ವಾರಕನಾಥ್, ಇತರರು ಕೋಲಾರದಲ್ಲಿ ಪ್ರಥಮವಾಗಿ ಅಹಿಂದ ಸ್ಥಾಪಿಸಿದರು ಎಂದು ವಿವರಿಸಿದರು. ನಂತರ ಅಹಿಂದ ಸಂಘಟನೆಯಲ್ಲಿ ಸಿದ್ದರಾಮಯ್ಯ ಪ್ರಮುಖ ಪಾತ್ರ ವಹಿಸಿದ್ದರು ಎಂದರು.
ಲೋಕಸಭೆ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯುತ್ತಿದೆ. ಇದರಲ್ಲಿ ಎಲ್ಲ ಪಕ್ಷದವರು ಪಾಲುದಾರರು ಎಂದ ವಿಶ್ವನಾಥ್, ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ 25ಸ್ಥಾನಗಳಿಗೆ ಸಾವಿರ ಕೋಟಿಗೂ ಹೆಚ್ಚು ಹಣ ವ್ಯಯಿಸಲಾಗಿದೆ ಎಂದು ಹೇಳಿದರು.