ಮೈಸೂರಿನ ಚರ್ಚ್ ಮೇಲೆ ನಡೆಸಿರುವ ದಾಳಿಯನ್ನು ಇದೊಂದು ವ್ಯವಸ್ಥಿತ ಪಿತೂರಿ ಎಂದು ಗುಡುಗಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಇಂತಹ ಪ್ರಕರಣಗಳಿಗೆ ಕಾರಣರಾಗುವವರಿಗೆ ಯಾವ ರೀತಿಯ ಶಿಕ್ಷೆ ಕಾದಿದೆ ಎಂಬುದನ್ನು ನೋಡಿ ಎಂದು ಎಚ್ಚರಿಸಿದ್ದಾರೆ.
ಯಾವುದೇ ಪಕ್ಷವಿರಲಿ, ಯಾವುದೇ ಸಂಘಟನೆಗಳಿರಲಿ ಅಥವಾ ಯಾವುದೇ ವ್ಯಕ್ತಿಗಳಿರಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಿದರೆ ಸರ್ಕಾರ ಯಾವುದೇ ಕಾರಣಕ್ಕೂ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಕಿಡಿಗೇಡಿಗಳಿಗೆ ಸಿಎಂ ಗಂಭೀರ ಎಚ್ಚರಿಕೆ ನೀಡಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಚರ್ಚ್ ಮೇಲೆ ನಡೆಸಿರುವ ದಾಳಿ ವ್ಯವಸ್ಥಿತ ಪಿತೂರಿಯಾಗಿದ್ದು, ತಕ್ಷಣವೇ ಪ್ರಕರಣದ ಕುರಿತಂತೆ ವರದಿ ನೀಡಲು ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಈ ಪ್ರಕರಣದ ಹಿಂದೆ ಯಾರ ಕೈವಾಡವಿದೆ ಎಂಬುದು ರಾಜ್ಯದ ಜನತೆಗೆ ತಿಳಿದಿದೆ. ಅಲ್ಪಸಂಖ್ಯಾತರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.