ಬಿಜೆಪಿ ಆಡಳಿತದಲ್ಲಿ ಅಲ್ಪಸಂಖ್ಯಾತರಿಗೆ ಉಳಿಗಾಲವಿಲ್ಲ: ಕಾಂಗ್ರೆಸ್
ಬೆಂಗಳೂರು, ಮಂಗಳವಾರ, 26 ಜನವರಿ 2010( 11:01 IST )
ರಾಜ್ಯದಲ್ಲಿನ ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿಗಳು ನಡೆಯುತ್ತವೇ ಇವೆ. ಪ್ರತೀ ಬಾರಿ ದಾಳಿ ನಡೆದಾಗಲೂ ವಿರೋಧ ಪಕ್ಷಗಳೇ ಕಾರಣ ಎಂದು ಬೆಟ್ಟು ಮಾಡುವುದು ಸರಕಾರಕ್ಕೂ ಅಭ್ಯಾಸವಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆಯನ್ನೂ ವಿಧಿಸುತ್ತಿಲ್ಲ. ಈ ರೀತಿ ಕಿರುಕುಳ ಕೊಟ್ಟು ಅಲ್ಪಸಂಖ್ಯಾತರನ್ನು ರಾಜ್ಯದಿಂದ ಓಡಿಸುವುದು ಬಿಜೆಪಿ ಹುನ್ನಾರ ಎಂದು ಕಾಂಗ್ರೆಸ್ ಆರೋಪಿಸಿದೆ.
ಪ್ರತಿಪಕ್ಷಗಳು ಸರಕಾರಕ್ಕೆ ಸಲಹೆಗಳನ್ನು ನೀಡಿದರೆ ಅದನ್ನು ಪರಿಗಣಿಸುವುದೇ ಇಲ್ಲ. ನಾವೇನು, ಕೇಂದ್ರ ಸರಕಾರ ನೀಡುವ ಸಲಹೆಗಳನ್ನೇ ಬಿಜೆಪಿ ಸರಕಾರ ಲೆಕ್ಕಿಸುತ್ತಿಲ್ಲ. ಜಾತ್ಯತೀತ ರಾಷ್ಟ್ರವೆನ್ನುವುದನ್ನು ಅವರು ಮರೆತಂತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಕಿಡಿ ಕಾರಿದ್ದಾರೆ.
ಕುರ್ಚಿ ಬಿಟ್ಟು ತೊಲಗಿ: ಉಗ್ರಪ್ಪ ನಮ್ಮದು ಜಾತ್ಯತೀತ ರಾಷ್ಟ್ರ. ಅಲ್ಪಸಂಖ್ಯಾತರ ಧಾರ್ಮಿಕ ಕೇಂದ್ರಗಳನ್ನು ರಕ್ಷಿಸಲು ಸಾಧ್ಯವಾಗದದ್ದರೆ ಅಧಿಕಾರದಿಂದ ಕೆಳಗಿಳಿಯಿರಿ. ಜನರ ರಕ್ಷಣೆಯಲ್ಲಿ ವಿಫಲವಾದಾಗ ರಾಜಕೀಯ ಲಾಭಕ್ಕೆ ಯತ್ನಿಸಬೇಡಿ ಎಂದು ವಿಧಾನ ಪರಿಷತ್ ವಿರೋಧಪಕ್ಷದ ಮಾಜಿ ನಾಯಕ ವಿ.ಎಸ್. ಉಗ್ರಪ್ಪ ಹೇಳಿದ್ದಾರೆ.
ಬೇಜವಾಬ್ದಾರಿಯುತ ಸರಕಾರ: ಸಿದ್ದರಾಮಯ್ಯ ತೀರಾ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುವ ರಾಜ್ಯ ಸರಕಾರವು ದಾಳಿ ನಡೆಸುತ್ತಿರುವವರು ಆರೆಸ್ಸೆಸ್ ಮುಂತಾದ ಹಿಂದೂ ಸಂಘಟನೆಗಳು ಎಂಬ ಅರಿವಿದ್ದರೂ ಅವರ ವಿರುದ್ಧ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಪೊಲೀಸರಂತೂ ಸಂಪೂರ್ಣ ನಿಷ್ಕ್ರಿಯರಾಗಿದ್ದು, ಸರಕಾರಕ್ಕೆ ಇದುವರೆಗೂ ಯಾರೊಬ್ಬರನ್ನೂ ಬಂಧಿಸಲಾಗಿಲ್ಲ ಎಂದು ಸಿದ್ಧರಾಮಯ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕ್ರೈಸ್ತರಿಗೆ ಕಾಂಗ್ರೆಸ್ ಬೆಂಬಲ: ಶಿವಕುಮಾರ್ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಡೆಯದ ಚರ್ಚ್ ದಾಳಿಗಳು ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಮೇಲೆ ಯಾಕೆ ನಡೆಯುತ್ತಿದೆ ಎಂಬುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು ಎಂದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ಸರಕಾರಕ್ಕೆ ಅಲ್ಪಸಂಖ್ಯಾತರನ್ನು ರಕ್ಷಿಸುವ ಇಚ್ಛಾಶಕ್ತಿಯಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಯಾವುದೇ ಒಂದು ಸಮುದಾಯದ ಪಕ್ಷವಲ್ಲ. ನಾವು ಸರ್ವಧರ್ಮ, ಜಾತಿಗಳಲ್ಲಿ ನಂಬಿಕೆ ಇಟ್ಟುಕೊಂಡವರು. ಕ್ರೈಸ್ತರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತದೆ ಎಂದಿರುವ ಡಿಕೆಶಿ, ಬಿಜೆಪಿ ಸರಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಸಮೀಪದ ಪೆರ್ನಮಕ್ಕಿಯ ಸೇಂಟ್ ಅಂತೋನಿ ಚರ್ಚ್ ಹಾಗೂ ಮೈಸೂರಿನ ಹೋಲಿ ಫ್ಯಾಮಿಲಿ ಚರ್ಚ್ ಮೇಲೆ ಭಾನುವಾರ ಮಧ್ಯರಾತ್ರಿ ದುಷ್ಕರ್ಮಿಗಳು ದಾಳಿ ನಡೆಸಿದ್ದರು.