ಜ್ಞಾನಭಾರತಿಯ ಬೆಂಗಳೂರು ವಿಶ್ವವಿದ್ಯಾಲಯದ ಆವರಣದ ಕೊಠಡಿಯೊಂದರಲ್ಲಿ ರಾತ್ರಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅಲ್ಲಿದ್ದ ಪ್ರಮುಖ ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ ಎಂದು ಮೂಲಗಳು ಹೇಳಿವೆ.
ವಿಶ್ವವಿದ್ಯಾಲಯದ ಮುಖ್ಯ ಕಚೇರಿಯ ಸಮೀಪದಲ್ಲಿಯೇ ಇರುವ ಪರೀಕ್ಷಾ ಭವನದಲ್ಲಿ ಈ ಆಕಸ್ಮಿಕ ನಡೆದಿದೆ. ಕಳೆದ ರಾತ್ರಿ ಬೆಂಕಿ ಕಾಣಿಸಿಕೊಂಡದ್ದನ್ನು ಗಮನಿಸಿದ ವಿದ್ಯಾರ್ಥಿಯೊಬ್ಬರು ಪೊಲೀಸರಿಗೆ ವಿಷಯ ತಿಳಿಸಿದರು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಐದು ವಾಹನಗಳು ಹಾಗೂ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಶ್ರಮಿಸಿದರು.
ಈ ಪರೀಕ್ಷಾ ಭವನದಲ್ಲಿ ಹಳೆಯ ಉತ್ತರ ಪತ್ರಿಕೆ ಮತ್ತು ಪ್ರಮುಖ ದಾಖಲೆಗಳಿದಿದ್ದು ಅಗ್ನಿಗಾಹುತಿಯಾಗಿವೆ. ಈ ಸಂಬಂಧ ಅಧಿಕಾರಿಗಳು ತಡರಾತ್ರಿಯಾದರೂ ದೂರು ನೀಡಿರಲಿಲ್ಲ. ಇದು ಆಕಸ್ಮಿಕ ಘಟನೆಯೇ ಅಥವಾ ಕಿಡಿಗೇಡಿಗಳ ಕೃತ್ಯವೇ ಎಂಬುದರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.