ಕೇಂದ್ರಕ್ಕೆ ತಾಕತ್ತಿದ್ರೆ ನೈಸ್ ಹಗರಣ ತನಿಖೆ ಮಾಡ್ಲಿ: ಗೌಡ
ನವದೆಹಲಿ, ಬುಧವಾರ, 27 ಜನವರಿ 2010( 11:15 IST )
ನೈಸ್ ವಿರುದ್ಧ ಹೋರಾಟವನ್ನು ಮುಂದುವರಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕೇಂದ್ರ ಸರ್ಕಾರಕ್ಕೆ ತಾಕತ್ತಿದ್ರೆ ನೈಸ್ ಹಗರಣದ ನಿಷ್ಪಕ್ಷಪಾತ ತನಿಖೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ.
ಸತ್ಯಂ, ಹರ್ಷದ್ ಮೆಹ್ತಾ ಹಾಗೂ ಕೇತನ್ ಮೆಹ್ತಾ ಹಗರಣಗಳಿಗಿಂತಲೂ ಬಹು ದೊಡ್ಡ ವಂಚನೆ ಪ್ರಕರಣ ಇದಾಗಿದ್ದು, ನನ್ನ ಬಳಿ ಇರೋ ಎಲ್ಲಾ ದಾಖಲೆಗಳನ್ನು ಒದಗಿಸಲು ತಾನು ಸಿದ್ದ ಎಂದು ಹೇಳಿದ್ದಾರೆ.
ಬೆಂಗಳೂರು ಮೈಸೂರು ಇನ್ಪ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಯಲ್ಲಿ ಯಡಿಯೂರಪ್ಪ ಸರ್ಕಾರ ರೈತರ ಬದುಕಿಗೆ ಕೊಳ್ಳಿ ಇಡಲು ಹೊರಟಿದೆ ಎಂದು ಅವರು ಗಂಭೀರವಾಗಿ ಆಪಾದಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬರೆದಿರುವ ಎರಡನೇ ಪತ್ರವನ್ನು ಅವರು ಇಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.
ನೈಸ್ ಕಂಪನಿ ಅಕ್ರಮವಾಗಿ ರೈತರ ಭೂಮಿಯನ್ನು ವಶಪಡಿಸಿಕೊಳ್ಳುವ ಕ್ರಮದ ವಿರುದ್ಧ ಪಶ್ಚಿಮ ಬಂಗಾಳದ ಸಿಂಗೂರು ಮಾದರಿ ಹೋರಾಟ ನಡೆಸಬೇಕಾದಿತು ಎಂದು ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.