ಚರ್ಚ್ಗಳ ಮೇಲೆ ದಾಳಿ ನಡೆಸುವವರನ್ನು ಜೈಲಿಗೆ ತಳ್ಳಿಗೆ ಸಾಲದು ಎಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಂತಹ ಕಿಡಿಗೇಡಿಗಳನ್ನು ಕಂಡರೆ ಸಾರ್ವಜನಿಕರೇ ಅವರ ಕೈ ಕತ್ತರಿಸಬೇಕು ಎಂದು ಹೇಳುವವನು ನಾನು ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಉಳವಿಯಲ್ಲಿನ ಸಮಾರಂಭವೊಂದರಲ್ಲಿ ಮಾತನಾಡುತ್ತ, ಸರ್ಕಾರದ ವರ್ಚಸ್ಸಿಗೆ ಕಪ್ಪು ಮಸಿ ಬಳಿಯಲು ದುಷ್ಟ ಶಕ್ತಿಗಳು ಯತ್ನಿಸುತ್ತಿದ್ದಾರೆಂದು ಕೆಂಡಾಮಂಡಲರಾದ ಯಡಿಯೂರಪ್ಪ, ಅಂತಹ ಕಿಡಿಕೇಡಿಗಳ ಕೈ ಕತ್ತರಿಸಬೇಕು ಎಂದು ನಾನು ಹೇಳುತ್ತೇನೆ ಎಂದರು.
ನಮ್ಮ ಪರಂಪರೆ, ಧರ್ಮ ಹಾಗೂ ಸಂಸ್ಕೃತಿಗೆ ಅಪಮಾನ ಮಾಡುವ ರೀತಿಯಲ್ಲಿ ನಡೆದುಕೊಳ್ಳಲಾಗುತ್ತಿದೆ. ಇದನ್ನು ಬಿಜೆಪಿ ಸರ್ಕಾರ ಖಂಡಿತ ಸಹಿಸುವುದಿಲ್ಲ. ಕೋಮುಸೌಹಾರ್ದತೆಗೆ ಧಕ್ಕೆ ತರುವ ದುಷ್ಟ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಯಾವುದೇ ಮುಲಾಜಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿನ ಶಾಂತಿ-ಸುವ್ಯವಸ್ಥೆಯನ್ನು ಹಾಳುಗೆಡುವ ನಿಟ್ಟಿನಲ್ಲಿ ಕಿಡಿಕೇಡಿಗಳು ದುರುದ್ದೇಶಪೂರ್ವಕವಾಗಿ ಚರ್ಚ್, ಪ್ರಾರ್ಥನಾ ಮಂದಿರ, ದೇವಸ್ಥಾನಗಳ ಮೇಲೆ ದಾಳಿ ನಡೆಸುತ್ತಿರುವುದಾಗಿ ಆರೋಪಿಸಿದರು.
ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳ ಮೇಲೆ ನಡೆದ ದಾಳಿ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಲು ಆದೇಶಿಸಲಾಗಿದೆ. ಈಗಾಗಲೇ ನಡೆದಿರುವ ದಾಳಿ ಬಗೆಗಿನ ವರದಿ ಶೀಘ್ರವೇ ತಮ್ಮ ಕೈಸೇರಲಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಅವರು ಕೋಪದಿಂದ ಹಾಗೇ ಹೇಳಿದ್ದಾರೆ-ಅನಂತಮೂರ್ತಿ: ರಾಜ್ಯದಲ್ಲಿ ನಡೆದಿರುವ ಚರ್ಚ್ಗಳ ಮೇಲಿನ ದಾಳಿಯ ಕಿಡಿಗೇಡಿಗಳ ಕೈ ಕತ್ತರಿಸಿ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಖ್ಯಾತ ಸಾಹಿತಿ ಯು.ಆರ್.ಅನಂತಮೂರ್ತಿ, ಮುಖ್ಯಮಂತ್ರಿಗಳು ಆವೇಶದಿಂದ ಆ ರೀತಿ ಹೇಳಿಕೆ ನೀಡಿದ್ದಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾದ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಭಾಷಿಕ ಹಿಂಸಾಚಾರದ ಪದ ಪ್ರಯೋಗ ಸರಿಯಲ್ಲ-ಬರಗೂರು: ಮುಖ್ಯಮಂತ್ರಿ ಆಗಿರಲಿ, ಯಾರೇ ಇರಲಿ ಭಾಷಿಕ ಹಿಂಸಾಚಾರದಂತಹ ಪದ ಪ್ರಯೋಗ ಮಾಡಬಾರದು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ. ಆವೇಶದಲ್ಲಿ ಅಂತಹ ಮಾತನ್ನು ಹೇಳಿದ್ದಾರೆಂಬುದನ್ನು ಒಪ್ಪಲು ಸಾಧ್ಯವಿಲ್ಲ. ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಹಿಂಸೆಗೆ ಪ್ರಚೋದನೆ ನೀಡುವಂತಹ ಹೇಳಿಕೆ ನೀಡುವುದು ಸರಿಯಲ್ಲ ಎಂದು ಪ್ರತಿಪಾದಿಸಿದರು.