ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಅವಧಿ ಮುಗಿದ ಕೂಡಲೇ ತನಗೆ ಕೆಎಂಎಫ್ ಅಧ್ಯಕ್ಷಗಾದಿ ನೀಡುವುದಾಗಿ ಭರವಸೆ ನೀಡಿದ್ದರು ಕೂಡ ಇದೀಗ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಪಕ್ಷದ ವರಿಷ್ಠರು ವಿಫಲರಾಗಿದ್ದಾರೆ ಎಂದು ನಿರ್ಗಮಿತ ಅಧ್ಯಕ್ಷ ಡಿ.ವಿ.ಸದಾನಂದ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನವರಿ 30ರಂದು ಕೆಎಂಎಫ್ ನಿರ್ದೇಶಕ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ತಿಳಿಸಿರುವ ಅವರು, ಪಕ್ಷದ ನಾಯಕರ ಧೋರಣೆ ಬೇಸರ ತಂದಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಕೆ.ಎಸ್.ಈಶ್ವರಪ್ಪ ಅವರು ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆ ನಿಟ್ಟಿನಲ್ಲಿ ಡಿ.ವಿ.ಸದಾನಂದ ಗೌಡರ ಅಧಿಕಾರ ಅವಧಿ ಮುಕ್ತಾಯಗೊಂಡಂತಾಗಿದೆ. ಆದರೆ ತನಗೆ ಕೆಎಂಎಫ್ ಅಧ್ಯಕ್ಷಗಾದಿ ನೀಡುವುದಾಗಿ ಪಕ್ಷದ ವರಿಷ್ಠರು ಭರವಸೆ ನೀಡಿದ್ದರು. ಈಗ ಕೆಎಂಎಫ್ ಅಧ್ಯಕ್ಷಗಾದಿ ಹುದ್ದೆ ನೀಡುವ ಬಗ್ಗೆ ಪಕ್ಷದ ವರಿಷ್ಠರು ಮುತುವರ್ಜಿ ವಹಿಸುತ್ತಿಲ್ಲ ಎಂದು ದೂರಿದರು.
ಬಳ್ಳಾರಿಯ ಗಣಿಧಣಿಯಾಗಿರುವ ಸೋಮಶೇಖರ ರೆಡ್ಡಿ ಕೆಎಂಎಫ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರೆಡ್ಡಿ ಅವರನ್ನು ಕೆಎಂಎಫ್ ಅಧ್ಯಕ್ಷರನ್ನಾಗಿ ಮಾಡುವ ಮುನ್ನ ನಡೆಸಿದ ಮಾತುಕತೆಯ ಸಂದರ್ಭದಲ್ಲಿ, ಕೇವಲ 3ತಿಂಗಳಿಗಷ್ಟೇ ಕೆಎಂಎಫ್ ಅಧ್ಯಕ್ಷ ಹುದ್ದೆ ರೆಡ್ಡಿಯವರಿಗೆ ಎಂದು ತೀರ್ಮಾನಿಸಲಾಗಿತ್ತು. ನಂತರ ಕೆಎಂಎಫ್ ಅಧ್ಯಕ್ಷಗಿರಿ ಡಿ.ವಿ.ಸದಾನಂದಗೌಡರಿಗೆ ಎಂದು ನಿರ್ಧರಿಸಲಾಗಿತ್ತು.
ಆದರೆ ತಾನು ಯಾವುದೇ ಕಾರಣಕ್ಕೂ ಕೆಎಂಎಫ್ ಅಧ್ಯಕ್ಷ ಹುದ್ದೆ ತೊರೆಯಲಾರೆ ಎಂದು ಪಟ್ಟು ಹಿಡಿಯುವ ಮೂಲಕ ಬಿಜೆಪಿಯಲ್ಲಿ ಮತ್ತೆ ಅಪಸ್ವರದ ಭುಗಿಲೇಳತೊಡಗಿದೆ.