ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಮಣೆ-ಬಿಬಿಎಂಪಿ ಚುನಾವಣೆ ಮುಂದಕ್ಕೆ
ನವದೆಹಲಿ, ಗುರುವಾರ, 28 ಜನವರಿ 2010( 18:15 IST )
ಬಿಬಿಎಂಪಿ ವಾರ್ಡ್ವಾರು ಮೀಸಲಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ತೀರ್ಪಿಗೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವ ಮೂಲಕ ಮೀಸಲಾತಿ ಪಟ್ಟಿಯನ್ನು ಸರಿಪಡಿಸಿ ಚುನಾವಣೆ ನಡೆಸುವಂತೆ ನಿರ್ದೇಶನ ನೀಡುವ ಮೂಲಕ ಚುನಾವಣೆ ಮುಂದಕ್ಕೆ ಹೋಗುವುದು ಖಚಿತವಾದಂತಾಗಿದೆ.
ಪಾಲಿಕೆ ವ್ಯಾಪ್ತಿಯ ವಾರ್ಡ್ ಮೀಸಲಾತಿ ವಿವಾದ ಕುರಿತಂತೆ ಹೈಕೋರ್ಟ್, ಕೆಲ ಮಾರ್ಪಾಡುಗಳನ್ನು ಮಾಡಿ ಸರಿಪಡಿಸುವಂತೆ ಸೂಚನೆ ನೀಡಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸುತ್ತೀರಾ ಎಂದು ಸುಪ್ರೀಂಕೋರ್ಟ್ ಪೀಠ ರಾಜ್ಯ ಸರ್ಕಾರವನ್ನು ಕೇಳಿದಾಗ, ಸರ್ಕಾರದ ಪರ ವಕೀಲರಿಂದ ಯಾವುದೇ ಪ್ರತಿರೋಧ ದೊರೆಯಲಿಲ್ಲ. ಬದಲಾಗಿ ನ್ಯಾಯಾಲಯದ ಆಜ್ಞೆಯನ್ನು ಪಾಲಿಸಲು ಸಿದ್ದ ಎಂದು ಹೇಳಿ ನುಣುಚಿಕೊಂಡಿತ್ತು.
ಆದರೆ ಚುನಾವಣಾ ಆಯೋಗ ಮಾತ್ರ ಇದಕ್ಕೆ ಪ್ರತಿರೋಧ ಒಡ್ಡಿ, ಮಾರ್ಪಾಡು ಮಾಡಲು ಮುಂದಾದರೆ ಚುನಾವಣೆ ಮತ್ತೆ 4ತಿಂಗಳ ಕಾಲ ಮುಂದೆ ಹೋಗುವ ಸಾಧ್ಯಗಳಿದ್ದು ಯಥಾಸ್ಥಿತಿ ಚುನಾವಣೆ ನಡೆಯಲಿ ಎಂದು ರಾಜ್ಯ ಚುನಾವಣಾ ಆಯೋಗದ ಪರ ವಕೀಲ ಕೆ.ಎನ್.ಫಣೀಂದ್ರ ವಾದ ಮಂಡಿಸಿದರು.
ಸುಮಾರು 2ಗಂಟೆಗಳ ಕಾಲ ವಾದ-ಪ್ರತಿವಾದವನ್ನು ಆಲಿಸಿದ ಮುಖ್ಯನ್ಯಾಯಮೂರ್ತಿ ಕೆ.ಜೆ.ಬಾಲಕೃಷ್ಣನ್, ನ್ಯಾಯಮೂರ್ತಿಗಳಾದ ಚೌಹಾಣ್ ಮತ್ತು ಪಾರಿಚಾಲ್ ಅವರನ್ನೊಳಗೊಂಡ ಪೀಠ, ರಾಜ್ಯ ಹೈಕೋರ್ಟ್ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿ, ಹೈಕೋರ್ಟ್ ಆದೇಶವನ್ನು ಎತ್ತಿಹಿಡಿಯಿತು.