ಚರ್ಚ್, ಮಂದಿರ, ಮಸೀದಿಗಳ ಮೇಲೆ ದಾಳಿ ಮಾಡುವವರ ಕೈ ಕತ್ತರಿಸಿ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂಘ-ಪರಿವಾರದ ಜಾಯಮಾನವನ್ನು ಪ್ರದರ್ಶಿಸಿದ್ದಾರೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಿಡಿಕಾರಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರ ವರ್ತನೆ ಇದೇನೂ ಹೊಸದಲ್ಲ, ಮಂಗಳೂರಿನಲ್ಲಿ ಬಜರಂಗದಳ ಸಮಾವೇಶ ನಡೆದ ನಂತರ ಇಂತಹ ವೀರಾವೇಶದ ಹೇಳಿಕೆಗಳು ಹೊರಬರುತ್ತಿವೆ. ಬಿಜೆಪಿ ಮುಖಂಡರು ಯಾವೆಲ್ಲ ಸಂದರ್ಭದಲ್ಲಿ ಏನೆಲ್ಲಾ ಹೇಳಿಕೆಗಳನ್ನು ಕೊಟ್ಟಿದ್ದಾರೆ ಎಂಬುದು ಜನರ ಗಮನದಲ್ಲಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೋಮುಸಾಮರಸ್ಯ ಎಂಬುದು ಉಳಿದಿಲ್ಲ. ಅಶಾಂತಿ ವಾತಾವರಣವೇ ಹೆಚ್ಚಾಗುತ್ತಿದೆ ಎಂದು ಗೌಡರು ದೂರಿದರು.
ಚರ್ಚ್ ಮೇಲೆ ಅಥವಾ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ಮಾಡಿದವರ ವಿರುದ್ಧ ಕಾನೂನಿನ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂಬ ಹೇಳಿಕೆ ಕೊಡುವುದನ್ನು ಬಿಟ್ಟು, ಈ ರೀತಿ ಹಿಂಸೆಗೆ ಪ್ರಚೋದನೆ ನೀಡುವಂತಹ ಹೇಳಿಕೆ ನೀಡುವುದು ಸರಿಯಲ್ಲ ಎಂದು ಸಲಹೆ ನೀಡಿದರು.