ನೈಸ್ ಯೋಜನೆಗೆ ರೈತರಿಂದ ವಶಪಡಿಸಿಕೊಂಡಿರುವ ಜಮೀನು, ಅಧಿಸೂಚನೆ ಹೊರಡಿಸಿ ಕೈಬಿಟ್ಟಿರುವ ಜಮೀನಿನ ವಿವರ ನೀಡುವಂತೆ ಆಗ್ರಹಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕೆಐಎಡಿಬಿ ಕಚೇರಿ ಮುಂದೆ ರೈತರೊಂದಿಗೆ ಗುರುವಾರ ಧರಣಿ ನಡೆಸಿದರು.
ಅಲ್ಲದೆ, ಕೆಐಎಡಿಬಿ ನೀಡುವ ಮಾಹಿತಿ ಆಧರಿಸಿ ರೈತರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶುಕ್ರವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು. ಆನಂತರ ಮತ್ತೊಂದು ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಶನಿವಾರ ರಾಜಭವನದ ಮುಂದೆ ಧರಣಿ ನಡೆಸಿ, ರಾಜ್ಯಪಾಲರಿಗೂ ಮನವಿ ಸಲ್ಲಿಸಲಾಗುವುದು ಎಂದರು.
ಬಿಬಿಎಂಪಿ ಯೋಜನೆಗೆ ತಮ್ಮ ಕಾಲದಲ್ಲಿ ಎಷ್ಟು ಜಮೀನು ಕೊಡಲಾಗಿತ್ತು. ಆನಂತರ ಮುಖ್ಯಮಂತ್ರಿಗಳಾದ ಜೆ.ಎಚ್.ಪಟೇಲ್, ಎಸ್.ಎಂ.ಕೃಷ್ಣ, ಧರಂಸಿಂಗ್, ಕುಮಾರಸ್ವಾಮಿ, ಯಡಿಯೂರಪ್ಪ ಕಾಲದಲ್ಲಿ ಎಷ್ಟೆಷ್ಟು ಜಮೀನು ನೀಡಲಾಗಿದೆ ಎಂಬುದನ್ನು ಕೆಐಎಡಿಬಿ ಮಾಹಿತಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.