ಜವಾಬ್ದಾರಿಯುತ ಸ್ಥಾನದಲ್ಲಿದ್ದು ಬೇಕಾಬಿಟ್ಟಿ ಹೇಳಿಕೆ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ಪ್ರಕರಣ ದಾಖಲಿಸಿ ಎಂದು ಕೆಪಿಸಿಸಿ ಕಾಂಗ್ರೆಸ್ ವಕ್ತಾರ ವಿ.ಎಸ್. ಉಗ್ರಪ್ಪ ಆಗ್ರಹಿಸಿದ್ದಾರೆ.
ಚರ್ಚ್, ದೇವಸ್ಥಾನ ಮತ್ತು ಮಸೀದಿಗಳ ಮೇಲೆ ದಾಳಿ ನಡೆಸಿ ಸೌಹಾರ್ದ ವಾತಾವರಣ ಕೆಡಿಸುವವರ ಕೈ ಕತ್ತರಿಸಿ ಎಂದು ಹೇಳುವ ಮೂಲಕ ಮುಖ್ಯಮಂತ್ರಿಯವರು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಸಂವಿಧಾನಕ್ಕೆ ಪೂರಕವಾಗಿ ನಡೆದುಕೊಂಡು, ಅದನ್ನು ಎತ್ತಿ ಹಿಡಿಯುವ ಬದಲು ಕೈ ಕತ್ತರಿಸಿ ಎಂದು ಸಂವಿಧಾನವನ್ನೇ ಉಲ್ಲಂಘಿಸಿದ್ದಾರೆ. ಇದು ಅಕ್ಷಮ್ಯ ಅಪರಾಧ ಎಂದರು.
ಕೆಲ ದಿನಗಳ ಹಿಂದಷ್ಟೇ ಕಾರವಾರದಲ್ಲಿ ಕಾರ್ಯಕ್ರವೊಂದರಲ್ಲಿ ಮಾತನಾಡುತ್ತಿದ್ದ ಯಡಿಯೂರಪ್ಪ, ಕೋಮು ಸೌಹಾರ್ದತೆ ಕದಡಿಸಲು ಯತ್ನಿಸುವ ದುಷ್ಕರ್ಮಿಗಳ ವಿರುದ್ಧ ಹರಿಹಾಯ್ದಿದ್ದರು. ಅಲ್ಲದೆ ಅಂತವರನ್ನು ಪ್ರೋತ್ಸಾಹಿಸುವವನು ನಾನಲ್ಲ, ಅವರ ಕೈ ಕತ್ತರಿಸುವಂತೆ ಹೇಳುವವನು ನಾನು ಎಂದು ಅವರು ಆಕ್ರೋಶಭರಿತರಾಗಿ ನುಡಿದಿದ್ದರು.
ಮತ್ತೊಂದೆಡೆ ಎಲ್ಲಾ ಪ್ರಾರ್ಥನಾ ಮಂದಿರಗಳಿಗೆ ರಕ್ಷಣೆ ಕೊಡಲು ಅಸಾಧ್ಯ ಎಂದು ಹೇಳುವ ಮೂಲಕ ಗೃಹ ಸಚಿವ ವಿ.ಎಸ್. ಆಚಾರ್ಯ ತಮ್ಮ ದೌರ್ಬಲ್ಯವನ್ನೇ ಮೆರೆದಿದ್ದಾರೆ. ಇಂತಹ ಹೇಳಿಕೆಗಳನ್ನು ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರೊಬ್ಬರು ನೀಡುತ್ತಾರೆ ಎಂದರೆ ಬಿಜೆಪಿ ಸರಕಾರದ ಆಡಳಿತ ವೈಖರಿ ಹೇಗಿದೆ ಎಂಬುದನ್ನು ಜನತೆ ಅರಿತುಕೊಳ್ಳಬಹುದಾಗಿದೆ ಎಂದರು.
ಆದರೆ ಗೃಹಸಚಿವರ ಹೇಳಿಕೆಗೆ ವ್ಯತಿರಿಕ್ತ ಪ್ರತಿಕ್ರಿಯೆ ನೀಡಿದ್ದ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಧಾರ್ಮಿಕ ಕೇಂದ್ರಗಳಿಗೆ ಭದ್ರತೆ ನೀಡುವುದು ಪೊಲೀಸ್ ಇಲಾಖೆಯ ಜವಾಬ್ದಾರಿ; ಇದರಲ್ಲಿ ಯಾವುದೇ ಲೋಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.