ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮತಾಂತರ, ಗೋಹತ್ಯೆ ನಿಷೇಧಕ್ಕೆ ಬಿಜೆಪಿ ಸರಕಾರ ಸಿದ್ಧತೆ (religion conversion | ban on cow slaughter | Karnataka | Church attack)
ಕಳೆದೆರಡು ವರ್ಷಗಳಿಂದ ನಿರಂತರ ಚರ್ಚ್ಗಳ ಮೇಲೆ ದಾಳಿ ಮುಂದುವರಿಯುತ್ತಿದ್ದಂತೆಯೇ ಇತ್ತ ರಾಜ್ಯ ಸರಕಾರವು ಮತಾಂತರ ನಿಷೇಧ ಮತ್ತು ಗೋಹತ್ಯೆ ನಿಷೇಧ ಕಾನೂನುಗಳನ್ನು ಜಾರಿಗೊಳಿಸಲು ಸಿದ್ಧವಾಗುತ್ತಿದೆ.
ಪ್ರಸಕ್ತ ಗುಜರಾತ್, ಮಧ್ಯಪ್ರದೇಶ, ಅರುಣಾಚಲ ಪ್ರದೇಶ, ಛತ್ತೀಸಗಢ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಅದರಂತೆ ರಾಜ್ಯದಲ್ಲಿ ಕೂಡ ಮತಾಂತರ ನಿಷೇಧ ಕಾನೂನನ್ನು ಜಾರಿಗೊಳಿಸಲು ಬಿಜೆಪಿ ಸರಕಾರ ನಿರ್ಧರಿಸಿದ್ದು, ಅದಕ್ಕಾಗಿ ಸಿದ್ಧತೆ ನಡೆಸುತ್ತಿದೆ.
ಮಸೂದೆ ರಚನಾ ಇಲಾಖೆಯು ಸಿದ್ಧಪಡಿಸಿದ ಮತಾಂತರ ನಿಷೇಧ ಕಾನೂನನ್ನು ಈಗ ರಾಜ್ಯ ಗೃಹ ಇಲಾಖೆಗೆ ಕಳುಹಿಸಿ ಕೊಡಲಾಗಿದೆ. ಅಲ್ಲಿ ಅಗತ್ಯವಿರುವ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿದ ನಂತರ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ.
ಮಸೂದೆಯು ವಿಧಾನಸಭೆಯಲ್ಲಿ ಅಂಗೀಕಾರ ಪಡೆದ ನಂತರ ಗೃಹ ಇಲಾಖೆಯು ಇದನ್ನು ಜಾರಿಗೊಳಿಸಲಿದ್ದು, ಪೊಲೀಸರಿಗೆ ಸಂಪೂರ್ಣ ಅಧಿಕಾರ ಮತ್ತು ಜವಾಬ್ದಾರಿಯನ್ನು ನೀಡಲಾಗುತ್ತದೆ. ಮತಾಂತರ ಕುರಿತು ಯಾರಾದರೂ ದೂರು ನೀಡಿದಲ್ಲಿ ಮಾತ್ರ ಪೊಲೀಸರಿಗೆ ಕ್ರಮ ಕೈಗೊಳ್ಳಲು ಅವಕಾಶಗಳಿರುತ್ತವೆ ಎಂದು ಮೂಲಗಳು ಹೇಳಿವೆ.
ಬಲ್ಲ ಮೂಲಗಳ ಪ್ರಕಾರ ಈಗ ರೂಪಿಸಲಾಗಿರುವ ಕರಡು ಶಾಸನದಲ್ಲಿ ಮತಾಂತರಕ್ಕೆ ಆರು ತಿಂಗಳ ಕಠಿಣ ಸಜೆಯನ್ನು ಸೇರಿಸಲಾಗಿದೆ. ಮಧ್ಯಪ್ರದೇಶಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಆರು ತಿಂಗಳ ಶಿಕ್ಷೆ ಕಡಿಮೆ. ಅಲ್ಲಿ ಮತಾಂತರ ಪ್ರಚೋದನೆ ನೀಡಿದವರಿಗೆ ಒಂದು ವರ್ಷ ಜೈಲು ಹಾಗೂ ಐದು ಸಾವಿರ ರೂಪಾಯಿಗಳ ದಂಡ ಹಾಕಲಾಗುತ್ತಿದೆ.
ಗೋಹತ್ಯೆ ನಿಷೇಧ ಕಾನೂನಿನ ಕರಡು ಪ್ರತಿ ಈಗಾಗಲೇ ಸಿದ್ಧವಾಗಿದೆ. ಅದನ್ನು ಕೂಡ ಮುಂದಿನ ಅಧಿವೇಶನದ ಸಂದರ್ಭದಲ್ಲಿ ಮಂಡಿಸಲಾಗುತ್ತದೆ. ಇವೆರಡೂ ಶಾಸನಗಳು ಪ್ರತಿಪಕ್ಷಗಳಿಂದ ತೀವ್ರ ಪ್ರತಿರೋಧ ಎದುರಿಸಬಹುದು ಎಂದು ನಿರೀಕ್ಷಿಸಲಾಗುತ್ತಿದೆ.