ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕ್ ಸ್ಥಾಪನೆಗೆ ಅನುಮತಿ
ಬೆಂಗಳೂರು, ಶುಕ್ರವಾರ, 29 ಜನವರಿ 2010( 12:38 IST )
ಸರ್ಕಾರದ 437 ಪದವಿ ಪೂರ್ವ ಕಲಾ ಕಾಲೇಜುಗಳಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಷಯ ವಿಭಾಗಗಳನ್ನು ತೆರೆಯಲು ಗುರುವಾರ ನಡೆದ ಸಚಿವ ಸಂಪುಟ ಅನುಮತಿ ನೀಡಿದೆ. ಅಲ್ಲದೇ, ಇದಕ್ಕೆ 2018 ಉಪನ್ಯಾಸಕರು ಬೇಕಾಗಿದ್ದು ಅವರನ್ನು ನೇರ ನೇಮಕಾತಿ ಮಾಡಲಾಗುವುದು ಎಂದು ಸಂಪುಟ ಸಭೆ ತೀರ್ಮಾನಗಳನ್ನು ಕಾನೂನು ಸಚಿವ ಸುರೇಶ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ, ನಂದಿ ಬೆಟ್ಟದ ಬಳಿ, ಐ.ಟಿ ಪಾರ್ಕ್ ಮಾದರಿಯಲ್ಲಿ ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯ(ಐಟಿಐಆರ್) ಯೋಜನೆಯನ್ನು ರಾಜ್ಯದಲ್ಲಿಯೂ ಅನುಷ್ಠಾನಗೊಳಿಸಲಾಗುವುದು ಎಂದರು.
ಅಲ್ಲದೇ, ನ್ಯಾಯಮೂರ್ತಿ ಕೆ.ಜಗನ್ನಾಥ್ ಶೆಟ್ಟಿ ವಿಚಾರಣಾ(ಹಾವೇರಿ ಗಲಭೆ) ಆಯೋಗ ಮತ್ತು ನ್ಯಾ.ಬಿ.ಕೆ.ಸೋಮಶೇಖರ್ ವಿಚಾರಣಾ(ಚರ್ಚ್ ದಾಳಿ) ಆಯೋಗದ ಅವಧಿಯನ್ನು ಮಾರ್ಚ್ 31ರವರೆಗೆ ವಿಸ್ತರಿಸಲು ಸಂಪುಟ ಒಪ್ಪಿಗೆ ಸೂಚಿಸಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಯೋಧರ ಮಾಸಿಕ ಗೌರವಧನವನ್ನು 3ಸಾವಿರದಿಂದ ನಾಲ್ಕು ಸಾವಿರಕ್ಕೆ ಹೆಚ್ಚಿಸಲು ಒಪ್ಪಿಗೆ ದೊರೆತಿದೆ. ತೋಟಗಾರಿಕೆ ವಿಜ್ಞಾನಗಳ ವಿವಿಯ ಮಸೂದೆಯನ್ನು ಶಾಸನ ಸಭೆಯಲ್ಲಿ ಮಂಡಿಸುವ ಪ್ರಯತ್ನ ಕೈಗೂಡಲಿಲ್ಲ. ಆ ನಿಟ್ಟಿನಲ್ಲಿ ಈ ಕುರಿತು ಸುಗ್ರೀವಾಜ್ಞೆ ಹೊರಡಿಸಲು ಸಂಪುಟ ಅನುಮೋದನೆ ನೀಡಿದೆ ಎಂದರು.