ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಕಗ್ಗಂಟಾಗಿದ್ದ ಕಾನೂನು ತೊಡಕು ಈಗ ಮತ್ತಷ್ಟು ಜಟಿಲಗೊಳ್ಳುವ ಮೂಲಕ ಚುನಾವಣೆ ಮುಂದಕ್ಕೆ ಹೋಗುವುದು ಅನಿವಾರ್ಯವಾದಂತಾಗಿದೆ.
ಈಗಾಗಲೇ ನಿಗದಿಯಾದಂತೆ ಫೆ.1ರಂದು ಚುನಾವಣೆಗೆ ಅಧಿಸೂಚನೆ ಹೊರಬೀಳಬೇಕಿದ್ದು, ಸರ್ಕಾರದ ಬಳಿ ವಾರ್ಡ್ ಮೀಸಲಾತಿ, ಪರಿಷ್ಕೃತ ಪಟ್ಟಿ ಇನ್ನೂ ಸಿದ್ದವಾಗಿಲ್ಲ.
ಆ ನಿಟ್ಟಿನಲ್ಲಿ ಕೂಡಲೇ ಬಿಬಿಎಂಪಿಯ ಹೊಸ ಮೀಸಲು ಪರಿಷ್ಕೃತ ಪಟ್ಟಿಯನ್ನು ಸಲ್ಲಿಸುವಂತೆ ರಾಜ್ಯ ಚುನಾವಣಾ ಅಯೋಗದ ಕಾರ್ಯದರ್ಶಿ ರವೀಂದ್ರನಾಥ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೋರ್ಟ್ ತೀರ್ಮಾನಗಳು ಸರ್ಕಾರದ ಪಾಲಿಗೆ ವರದಾನವಾಗಿ ಪರಿಣಮಿಸಿದ್ದು, ಸರ್ಕಾರದ ಉನ್ನತ ಮೂಲಗಳಿಂದ ಲಭ್ಯವಾಗಿರುವ ಖಚಿತ ಮಾಹಿತಿಯ ಪ್ರಕಾರ ನವೆಂಬರ್ಗೂ ಮುನ್ನ ಚುನಾವಣೆ ನಡೆಯುವುದು ಸಾಧ್ಯವೇ ಇಲ್ಲದಂತಾಗಿದೆ. ಹೀಗಾಗಿ ಚುನಾವಣೆಯ ತವಕದಲ್ಲಿದ್ದ ರಾಜಕೀಯ ಪಕ್ಷಗಳು, ಆಕಾಂಕ್ಷಿಗಳಿಗೆ ಭ್ರಮನಿರಸನ ಉಂಟಾಗಿದೆ. ಚುನಾವಣೆಗಾಗಿ ವರ್ಷದ ಕೊನೆಯವರೆಗೂ ಕಾಯಬೇಕಿದೆ.