ನಾಡದ್ರೋಹಿಯಾಗಿರುವ ಶ್ರೀಕೃಷ್ಣದೇವರಾಯನ ಪಟ್ಟಾಭಿಷೇಕದ 500ನೇ ವರ್ಷಾಚರಣೆ ಮಹೋತ್ಸವವನ್ನು ಕರ್ನಾಟಕ ಸರ್ಕಾರ ಯಾವ ಪುರುಷಾರ್ಥಕ್ಕೆ ಆಚರಿಸುತ್ತಿದೆ ಎಂದು ಕಿಡಿಕಾರಿರುವ ಖ್ಯಾತ ಸಂಶೋಧಕ ಡಾ.ಎಂ.ಎಂ.ಕಲ್ಬುರ್ಗಿ, ತೆಲುಗು ಪಕ್ಷಪಾತಿಯಾಗಿದ್ದ ಶ್ರೀಕೃಷ್ಣದೇವರಾಯ ಕನ್ನಡ ವಿರೋಧಿಯಾಗಿದ್ದರು.
ಪ್ರಜಾವಾಣಿ ದೈನಿಕದೊಂದಿಗೆ ಮಾತನಾಡಿದ ಅವರು, ತಾಳಿಕೋಟೆಯಲ್ಲಿ ನಡೆದ ಕದನ ಹಿಂದು-ಮುಸ್ಲಿಮರ ನಡುವಿನ ಕದನ ಅಲ್ಲ. ಅದು ಕನ್ನಡಿಗರ ಮತ್ತು ತೆಲುಗರ ನಡುವಿನ ಸಮರ ಎಂದು ಹೇಳಿದರು.
ಕನ್ನಡ ನೆಲದಲ್ಲಿ ತೆಲುಗರು ಠಿಕಾಣಿ ಹೂಡಲು ಅವಕಾಶ ಮಾಡಿಕೊಟ್ಟ ಮೊದಲ ವ್ಯಕ್ತಿಯೇ ಶ್ರೀಕೃಷ್ಣದೇವರಾಯ. ಇಂಥ ಕನ್ನಡದ್ರೋಹಿ ಅರಸನ ಪಟ್ಟಾಭೀಷಕದ 500ವರ್ಷಾಚರಣೆಗೆ ರಾಜ್ಯ ಸರ್ಕಾರ ಕೋಟಿಗಟ್ಟಲೆ ಖರ್ಚು ಮಾಡುತ್ತಿರುವುದು ನಾಚಿಕೆಗೇಡು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಿರುಚಿ ಬರೆದ ಇತಿಹಾಸವನ್ನೇ ಸರಿ ಎಂದು ನಂಬಿರುವ ನಾವು ಇತಿಹಾಸದ ವಾಸ್ತವಾಂಶಗಳನ್ನು ಪತ್ತೆ ಹಚ್ಚುವ ಕೆಲಸದಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.