ಗೌಡರ ನೈಸ್ ಹೋರಾಟದ ಹಿಂದಿನ ಸಂಚು ತಿಳಿಯುತ್ತಿಲ್ಲ: ಕೋಡಿಹಳ್ಳಿ
ಚನ್ನರಾಯಪಟ್ಟಣ, ಶನಿವಾರ, 30 ಜನವರಿ 2010( 14:57 IST )
ನೈಸ್ ರಸ್ತೆ ನಿರ್ಮಾಣಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ಜನಕ, ಆದರೂ ಅವರು ನೈಸ್ ರಸ್ತೆಗೆ ಭೂ ಕಬಳಿಕೆ ವಿರೋಧಿಸಿ ಹೋರಾಡುತ್ತಿರುವುದನ್ನು ಗಮನಿಸಿದರೆ ಅವರದು ಯಾವ ಮಾಸ್ಟರ್ ಪ್ಲಾನ್ ಎಂಬುದು ತಿಳಿಯದಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ದಿಂಡಗೂರು ಗ್ರಾಮದಲ್ಲಿ ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಗೌಡರು ಯೋಜನೆಗಾಗಿ 1,700ಎಕರೆ ಪ್ರದೇಶವನ್ನು ನೀಡಲು ಒಪ್ಪಿಗೆ ನೀಡಿದ್ದಾರೆ. ನಂತರದಲ್ಲಿ ಜೆ.ಎಚ್.ಪಟೇಲ್, ಎಸ್.ಎಂ.ಕೃಷ್ಣ ಹಾಗೂ ಯಡಿಯೂರಪ್ಪ ಕೂಡ ಸಹಕಾರ ನೀಡುತ್ತಲೇ ಬಂದಿದ್ದಾರೆ ಎಂದರು.
ದೇವೇಗೌಡರು ಅಶೋಕ್ ಖೇಣಿಯನ್ನು ಹೊಗಳಿ ಅಟ್ಟಕ್ಕೇರಿಸಿ ಇಂದು ಅವರ ವಿರುದ್ಧವೇ ಬೀದಿಗಿಳಿದಿರುವುದು ಯಾವ ರಾಜಕೀಯದ ಲಾಭಕ್ಕೋ ಅಂತ ತಿಳಿಯುತ್ತಿಲ್ಲ. ನೈಸ್ ವಿಷಯವನ್ನು ಮುಂದಿಟ್ಟುಕೊಂಡು ಬಿಬಿಎಂಪಿ ಚುನಾವಣೆಯ ಲಾಭ ಪಡೆಯುವ ಉದ್ದೇಶವೋ ಅಥವಾ ಬೇರಾವುದೋ ಕಾರಣಕ್ಕೋ ಅಂತ ತಿಳಿಯುತ್ತಿಲ್ಲ ಎಂದು ಹೇಳಿದರು.
ಆದರೆ ರಾಜ್ಯ ಸರ್ಕಾರ ಯಾವ ಒಪ್ಪಂದವನ್ನು ಬೇಕಾದರೂ ಮಾಡಿಕೊಳ್ಳಲಿ, ವಿದೇಶಿ ಸಂಸ್ಕೃತಿಯನ್ನು ಬಿಂಬಿಸುವ ಟೌನ್ಶಿಪ್ ನಮಗೆ ಬೇಕಾಗಿಲ್ಲ ಎಂದು ಎಚ್ಚರಿಸಿದರು.