ಭಾರತ ಹಿಂದೂರಾಷ್ಟ್ರ ಮಾಡಲು ಯಾರಿಂದ್ಲೂ ಸಾಧ್ಯವಿಲ್ಲ: ಸಿದ್ದು
ಬೆಂಗಳೂರು, ಭಾನುವಾರ, 31 ಜನವರಿ 2010( 09:05 IST )
NRB
ಕೋಮುಸಾಮರಸ್ಯದಿಂದ ಬಾಳುತ್ತಿರುವ ಭಾರತವನ್ನು ಯಾರಿಂದಲೂ ಹಿಂದೂ ರಾಷ್ಟ್ರ ಮಾಡಲು ಸಾಧ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಹಿಂದೂ, ಕ್ರೈಸ್ತ, ಮುಸ್ಲಿಂ, ಜೈನ ಸೇರಿ ಹಲವು ಧರ್ಮ, ಜಾತಿಗಳನ್ನೊಳಗೊಂಡ ಅಖಂಡ ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಸಾಧ್ಯವಿಲ್ಲವಾದರೂ ಅಂತಹ ಪ್ರಯತ್ನವನ್ನು ಅಶಾಂತಿಯ ಮೂಲಕ ನಡೆಸಲು ಸಂಘ ಪರಿವಾರ ನಡೆಸುತ್ತಲೇ ಬಂದಿದೆ ಎಂದು ದೂರಿದರು.
ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಹುತಾತ್ಮರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂಘ ಪರಿವಾರ ಹಿಂದೂರಾಷ್ಟ್ರ ಮಾಡುವ ಚಿಂತನೆ ಬಿಟ್ಟು, ಶಾಂತಿ, ಸಹಬಾಳ್ವೆ, ಸಮಾನತೆ ಮೂಡಿಸಲು ಪ್ರಯತ್ನಿಸಲಿ ಎಂದು ಸಲಹೆ ನೀಡಿದರು.
ಮಹಾತ್ಮಗಾಂಧಿ, ಅಂಬೇಡ್ಕರ್ ಹೆಸರನ್ನು ಕೆಲವು ಪಕ್ಷಗಳು ಬಳಸುತ್ತಿರುವುದು ನಾಟಕೀಯ. ಜಾತಿ ವ್ಯವಸ್ಥೆಯನ್ನು ದ್ವೇಷಿಸಿ ಸಮಾನತೆ ಮೂಡಿಸಲು ಗಾಂಧಿ ಮಾಡಿದ ಪ್ರಯತ್ನಗಳು ಸಂಘ ಪರಿವಾರಕ್ಕೆ ಹಿಡಿಸಲಿಲ್ಲ ಎಂದು ಹೇಳಿದರು.
ಹಳ್ಳಿಗಳ ಸ್ಥಿತಿ ಬದಲಾಗದೆ ದೇಶ ಉದ್ಧಾರ ಸಾಧ್ಯವಿಲ್ಲ ಎಂದ ಮಹಾತ್ಮಗಾಂಧಿ ಅವರ ಮಾತನ್ನು ನಾವು ನಿರೀಕ್ಷಿತ ಮಟ್ಟದಲ್ಲಿ ಜಾರಿಗೆ ತರಲಿಲ್ಲ. ಇಲ್ಲಿಗೆ ಬಂದ ಯೋಜನೆಗಳು ನಗರ ಕೇಂದ್ರೀಕೃತವಾಗಿದ್ದವು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಹಾತ್ಮಗಾಂಧಿ ಹಿಂದಿಗಿಂತ ಈಗ ಹೆಚ್ಚು ಪ್ರಸ್ತುತರಾಗಿದ್ದಾರೆ ಎಂದ ಸಿದ್ದರಾಮಯ್ಯ, ಗಾಂಧೀಜಿ ಅವರ ವಿಚಾರಧಾರೆಗಳನ್ನು ಮರೆಯಲು ಪ್ರಾರಂಭಿಸಿರುವುದೇ ನಾವು ಮಾಡಿದ ದೊಡ್ಡ ತಪ್ಪು ಎಂದು ಅಭಿಪ್ರಾಯಪಟ್ಟರು.