ರಾಜ್ಯಾದ್ಯಂತ ಚರ್ಚ್ ಮೇಲೆ ದಾಳಿ ಮುಂದುವರಿದ ಘಟನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಸ್.ಆರ್.ನಾಯಕ, ಗೃಹ ಸಚಿವ ಆಚಾರ್ಯ ಸಾಹೇಬ್ರೇ ಚರ್ಚ್ ಮೇಲಿನ ದಾಳಿ ಸಣ್ಣ ವಿಷಯ ಎಂದು ತೆಪ್ಪಗಿದ್ದರೆ ಇಡೀ ದೇಶವೇ ಛಿದ್ರವಾಗುತ್ತದೆ ಎಂದು ಹೇಳಿದರು.
ಕಾರವಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಸಚಿವರಾದವರು ಈ ರೀತಿ ಬೇಜವಾಬ್ದಾರಿಯಿಂದ ಹೇಳಿಕೆ ನೀಡಬಾರದು. ಗೃಹ ಸಚಿವರು ಸಣ್ಣ ವಿಷಯ ಎಂದು ತಳ್ಳಿಹಾಕುತ್ತಿದ್ದ ವಿಷಯವೇ ಈಗ ದೊಡ್ಡ ಸಮಸ್ಯೆಯಾಗಿದೆ ಎಂದರು.
ರಾಜ್ಯದಲ್ಲಿ ಚರ್ಚ್, ಪ್ರಾರ್ಥನಾ ಮಂದಿರದ ಮೇಲೆ ದಾಳಿ ನಡೆದಾಗಲೆಲ್ಲಾ ಅದೊಂದು ಸಣ್ಣ ವಿಷಯ ಎನ್ನುತ್ತಾರೆ ಆಚಾರ್ಯ ಸಾಹೇಬ್ರು, ರಾಜ್ಯದಲ್ಲಿ ಕೋಮುಸಾಮರಸ್ಯ ಕಾಪಾಡಬೇಕಾದದ್ದು ಸರ್ಕಾರದ ಕೆಲಸ, ಅದನ್ನು ಬಿಟ್ಟು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿರುವುದ ಸರಿಯಲ್ಲ ಎಂದು ಕಿಡಿಕಾರಿದರು.