ನೈಸ್ ಮೂಲ ಒಪ್ಪಂದ ಉಲ್ಲಂಘಿಸುವುದಿಲ್ಲ: ಗೌಡರಿಗೆ ಸಿಎಂ ಅಭಯ
ಬೆಂಗಳೂರು, ಭಾನುವಾರ, 31 ಜನವರಿ 2010( 14:26 IST )
ಬಿಎಂಐಸಿ ಯೋಜನೆಗೆ ಸಂಬಂಧಿಸಿದಂತೆ ಮೂಲ ಒಪ್ಪಂದವನ್ನು ಉಲ್ಲಂಘಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಪಾಲಿಸಲಾಗುವುದು ಎಂದು ಶನಿವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಖಾಮುಖಿ ಮಾತುಕತೆ ವೇಳೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು - ಮೈಸೂರು ಇನ್ಪ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಯ ಮೂಲ ಮಾರ್ಗದಲ್ಲಿ ಬದಲಾವಣೆ ಮಾಡಬಾರದು. ಯೋಜನೆ ಗುತ್ತಿಗೆ ಪಡೆದಿರುವ ನೈಸ್ ಸಂಸ್ಥೆಗೆ ಹೆಚ್ಚುವರಿ ಭೂಮಿ ನೀಡಬಾರದು ಎಂಬ ಹಳೆಯ ಬೇಡಿಕೆಗಳನ್ನೇ ಗೌಡರು ಮತ್ತೆ ಮುಂದಿಟ್ಟರು. ನೈಸ್ ಸಂಸ್ಥೆ ಜೊತೆಗಿನ ಒಡಂಬಡಿಕೆ ಪತ್ರ ಹಾಗೂ ನ್ಯಾಯಾಲಯಗಳ ನಿರ್ದೇಶನಕ್ಕೆ ಅನುಗುಣವಾಗಿ ನಡೆದುಕೊಳ್ಳುವುದಾಗಿ ಮುಖ್ಯಮಂತ್ರಿಗಳು ಪುನರುಚ್ಚರಿಸಿದರು.
ವಾಸ್ತವಿಕವಾಗಿ ಅದು ರೈತ ಮುಖಂಡರ ಜೊತೆಗಿನ ಮುಖ್ಯಮಂತ್ರಿ ಸಭೆಯಾಗಿದ್ದರೂ ದೇವೇಗೌಡರೇ ಅಲ್ಲಿ ಕೇಂದ್ರ ಬಿಂದುವಾಗಿದ್ದರು. ಸಭೆಯಲ್ಲಿ ಹಿಂದೆ ಆದ ಅಕ್ರಮಗಳ ದಾಖಲೆಗಳನ್ನೇ ಬಿಚ್ಚಿಟ್ಟ ಗೌಡರು, ಯೋಜನೆಯಲ್ಲಿ ಆದ ಬದಲಾವಣೆಗಳನ್ನು ಸಿಎಂ ಅವರಿಗೆ ವಿವರಿಸಿದರು. ಎಲ್ಲವನ್ನೂ ಶಾಂತವಾಗಿ ಆಲಿಸಿದ ಮುಖ್ಯಮಂತ್ರಿಗಳು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಮುಖ್ಯಮಂತ್ರಿಗಳು ನೈಸ್ ವಿಚಾರದಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ ಎಂದು ಸಭೆಯ ನಂತರ ಗೌಡರು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.