ನೆರೆ ಪರಿಹಾರದಲ್ಲಿ ರಾಜ್ಯ ಸರ್ಕಾರದ ಕೊಡುಗೆ ಶೂನ್ಯ: ಆರ್.ವಿ.
ಶಿವಮೊಗ್ಗ , ಭಾನುವಾರ, 31 ಜನವರಿ 2010( 14:32 IST )
ರಾಜ್ಯದ ನೆರೆ ಹಾವಳಿ ಪೀಡಿತ ಜಿಲ್ಲೆಗಳಿಗೆ ಇದುವರೆಗೆ ಬಿಡುಗಡೆ ಮಾಡಿರುವ ಪರಿಹಾರದ ಹಣದಲ್ಲಿ ರಾಜ್ಯಸರ್ಕಾರದ ಪಾಲು ಒಂದು ರೂಪಾಯಿ ಕೂಡ ಇಲ್ಲ, ಬದಲಾಗಿ ದಾನಿಗಳು ನೀಡಿರುವ ಹಣವನ್ನೇ ತನ್ನ ಬಳಿ ಇಟ್ಟುಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 2009-10ನೇ ಸಾಲಿನಲ್ಲಿ ನೆರೆ ಪರಿಹಾರಕ್ಕಾಗಿ ಸಿಆರ್ಎಫ್ ಮತ್ತು ಎನ್ಸಿಎಫ್ ಬಾಬ್ತಿನಲ್ಲಿ 1916.89 ಕೋಟಿ ರೂ.ಬಿಡುಗಡೆ ಮಾಡಿದೆ. ದಾನಿಗಳು ನೀಡಿರುವ 262.57 ಕೋಟಿ ರೂ.ನಲ್ಲಿ ರಾಜ್ಯ ಸರ್ಕಾರ ಕೇವಲ 126.36 ಕೋಟಿ ರೂ. ಬಿಡುಗಡೆ ಮಾಡಿದ್ದು, ಇನ್ನೂ 136.21 ಕೋಟಿ ರೂ.ತನ್ನ ಬಳಿಯೇ ಇಟ್ಟುಕೊಂಡಿದೆ. ಹೀಗಾಗಿ ರಾಜ್ಯದಲ್ಲಿ ನೆರೆಹಾವಳಿ ಪರಿಹಾರದಲ್ಲಿ ಇಲ್ಲಿಯವರೆಗೆ ನೀಡಿರುವ ಒಟ್ಟು 2043.45 ಕೋಟಿ ರೂ. ಹಣದಲ್ಲಿ ರಾಜ್ಯ ಸರ್ಕಾರದ ಕೊಡುಗೆ ಶೂನ್ಯ ಎಂದು ಅಂಕಿ -ಅಂಶದ ಸಹಿತ ವಿವರಿಸಿದರು.
ಇದುವರೆಗೆ ರಾಜ್ಯಕ್ಕೆ 1,100 ಕೊಟಿ ರೂ. ಬಿಡುಗಡೆ ಆಗಿದೆ. ಆದರೆ ಈ ಹಣಕ್ಕೆ ಸರ್ಕಾರ ಸಮರ್ಪಕವಾಗಿ ಲೆಕ್ಕ ಪತ್ರ ಇಟ್ಟಿಲ್ಲ. ದೊಡ್ಡ ಪ್ರಮಾಣದಲ್ಲಿ ಹಣ ದುರುಪಯೋಗ ಆಗುತ್ತಿದೆ ಎಂದು ದೂರಿದರು.