ಬಾಬರಿ ಮಸೀದಿ ಧ್ವಂಸ ಪ್ರಕರಣದಿಂದಾಗಿ ಇಡೀ ವಿಶ್ವದಲ್ಲಿಯೇ ಭಾರತೀಯರು ತಲೆ ತಗ್ಗಿಸುವಂತಾಗಿದೆ ಎಂದಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಇತ್ತೀಚೆಗೆ ರಾಜ್ಯದಲ್ಲಿ ಮರುಕಳಿಸುತ್ತಿರುವ ಚರ್ಚ್ ದಾಳಿ ಪ್ರಕರಣಗಳ ಬಗ್ಗೆ ಕಿಡಿಕಾರಿದರು.
ಸೇಂಟ್ ಜೋಸೆಫ್ ಪ್ರೌಢ ಶಾಲಾ ಅವರಣದಲ್ಲಿ ಕೊಂಕಣಿ ಕ್ಯಾಥೋಲಿಕರ ಸಂಘದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ನಡೆಯುತ್ತಿರುವ ಚರ್ಚ್ ದಾಳಿ ಪ್ರಕರಣ ಕರ್ನಾಟಕ ಸಂಸ್ಕೃತಿಗಷ್ಟೇ ಅಲ್ಲ ಇಡೀ ಮನುಕುಲಕ್ಕೆ ಆಗುತ್ತಿರುವ ಅಪಮಾನ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಕ್ರೈಸ್ತರು ಶಾಲಾ-ಕಾಲೇಜು ಮತ್ತು ಆಸ್ಪತ್ರೆ ಸೇರಿದಂತೆ ಅನೇಕ ಸೇವಾ ವಲಯಗಳಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಅವರನ್ನು ವಿದೇಶಿಯರಂತೆ ಪರಿಗಣಿಸುವುದು ಸರಿಯಲ್ಲ ಎಂದ ಅವರು ರಾಜ್ಯ ಮಾತ್ರವಲ್ಲ ಇಡೀ ದೇಶದಲ್ಲೇ ಅಪಾರ ಸೇವೆ ಸಲ್ಲಿಸಿರುವ ಕ್ರೈಸ್ತರ ಮೇಲೆ ಹಲ್ಲೆ ನಡೆಸುವುದು ಯಾವ ಮಾನವೀಯತೆ ಎಂದು ಪ್ರಶ್ನಿಸಿದರು.