ಇಂದಿನ ರಾಜಕೀಯ ವ್ಯವಸ್ಥೆ, ಭ್ರಷ್ಟಾಚಾರ, ಮೌಲ್ಯ-ತತ್ವಗಳನ್ನು ಗಾಳಿಗೆ ತೂರಿ ಆಡಳಿತ ನಡೆಸುತ್ತಿರುವ ಪರಿಯನ್ನು ಕಂಡಾಗ ದೇಶಕ್ಕೆ ಯಾಕಾದರೂ ಸ್ವಾತಂತ್ರ್ಯ ದೊರೆಯಿತೋ ಎಂದು ಜಿಗುಪ್ಸೆ ಹುಟ್ಟಿಸುತ್ತೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಎಚ್.ಎಂ.ಕೃಷ್ಣಯ್ಯ ವಿಷಾದ ವ್ಯಕ್ತಪಡಿಸಿದರು.
ನಗರದ ಭಾರತೀಯ ವಿದ್ಯಾಭವನದ ಆವರಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಗಾಂಧಿ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಅಧಿಕಾರಕ್ಕಾಗಿ ಹಾತೊರೆಯುತ್ತಿರುವವರು, ಭ್ರಷ್ಟ ವ್ಯವಸ್ಥೆಯನ್ನು ಕಂಡಾಗ ಇಂತಹವರಿಗಾಗಿಯೇ ಸ್ವಾತಂತ್ರ್ಯ ಹೋರಾಟಗಾರರು ತ್ಯಾಗ, ಬಲಿದಾನ ಮಾಡಿದರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದರು.
ಮಹಾತ್ಮಗಾಂಧೀಜಿ ಅವರು ತೋರಿದ ಪ್ರಾಮಾಣಿಕತೆ, ಅಹಿಂಸೆ ಮತ್ತು ಸೌಹಾರ್ದ ತತ್ವವನ್ನು ಯಾರೂ ಸಹ ಪಾಲಿಸುತ್ತಿಲ್ಲ. ಅವರ ವಿಚಾರಧಾರೆಗಳಿಗೆ ಯಾರೂ ಕಿಮ್ಮತ್ತು ನೀಡುತ್ತಿಲ್ಲ ಎಂದು ಹೇಳಿದರು.
ಗಾಂಧಿ ಅವರ ಮೌಲ್ಯಗಳನ್ನು ಗಾಳಿ ತೂರಿ, ಕೇವಲ ಅಧಿಕಾರ ಗಳಿಕೆಗಾಗಿ ಮಾತ್ರ ಅವರ ಹೆಸರನ್ನು ಬಳಸಿಕೊಳ್ಳುತ್ತಿರುವುದು ಈ ದೇಶದ ದುರಂತ ಎಂದು ಅಭಿಪ್ರಾಯವ್ಯಕ್ತಪಡಿಸಿದರು.