2008ರಲ್ಲಿ ರಾಜ್ಯದ ಹದಿನಾಲ್ಕು ಜಿಲ್ಲೆಗಳಲ್ಲಿ ನಡೆದ ಚರ್ಚ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಬಿ.ಕೆ.ಸೋಮಶೇಖರ್ ಆಯೋಗ ಸೋಮವಾರ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅಭಿಜಿತ್ ದಾಸ್ ಗುಪ್ತಾ ಅವರಿಗೆ ಮಧ್ಯಂತರ ವರದಿಯನ್ನು ಸಲ್ಲಿಸಿದೆ.
ರಾಜ್ಯದ ವಿವಿಧೆಡೆ ನಡೆದ ಚರ್ಚ್ ದಾಳಿಯ ಹಿಂದೆ ಸಂಘ ಪರಿವಾರದ ಬಜರಂಗದಳ ಜೊತೆ ಪೊಲೀಸರು ಶಾಮೀಲಾಗಿರುವುದಾಗಿ ವರದಿ ಬಹಿರಂಗಗೊಳಿಸಿದೆ. ಕೆಲವಡೆ ಮತಾಂತರದಂತಹ ಕಾರ್ಯಗಳನ್ನು ನಡೆಸುತ್ತಿದ್ದಿರುವುದು ಚರ್ಚ್ ಮೇಲಿನ ದಾಳಿಗೆ ಕಾರಣವಾಗಿರಬಹುದು ಎಂದು ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಲಾಗಿದೆ.
2008ರಲ್ಲಿ ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ರಾಜ್ಯದ 14ಜಿಲ್ಲೆಗಳಲ್ಲಿ ಚರ್ಚ್ ಮತ್ತು ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಸಲಾಗಿತ್ತು.
ದಾಳಿ ಪ್ರಕರಣದ ಕುರಿತು ತನಿಖೆ ನಡೆಸಲು ನ್ಯಾ.ಬಿ.ಕೆ.ಸೋಮಶೇಖರ್ ನೇತೃತ್ವದಲ್ಲಿ ವಿಚಾರಣಾ ಆಯೋಗ ನೇಮಿಸಲಾಗಿತ್ತು. ಇದೀಗ ಚರ್ಚ್ ದಾಳಿ ಕುರಿತಂತೆ 731ಸಾಕ್ಷಿಗಳ ವಿಚಾರಣೆ ನಡೆಸಿರುವ ಆಯೋಗ ಇಂದು ಹೆಚ್ಚುವರಿ ಮುಖ್ಯಕಾರ್ಯದರ್ಶಿ ಗುಪ್ತಾ ಅವರ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಇಲಾಖೆಗೆ ಮಧ್ಯಂತರ ವರದಿಯನ್ನು ಸಲ್ಲಿಸಿದೆ.
ಚರ್ಚ್ ದಾಳಿಗೆ ಸಂಬಂಧಪಟ್ಟಂತೆ 1019ಜನರಿಂದ ಪ್ರಮಾಣ ಪತ್ರ ಸಲ್ಲಿಸಲಾಗಿದೆ. ಅಲ್ಲದೇ, ಮಾರ್ಚ್ ಅಂತ್ಯದೊಳಗೆ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ನೀಡುವುದಾಗಿ ಆಯೋಗ ಈ ಸಂದರ್ಭದಲ್ಲಿ ತಿಳಿಸಿದೆ.