ಈ ಬಾರಿಯೂ ಪ್ರೇಮಿಗಳ ದಿನಾಚರಣೆಗೆ ಅಡ್ಡಿ: ಮುತಾಲಿಕ್ ಎಚ್ಚರಿಕೆ
ಬೆಳಗಾವಿ, ಸೋಮವಾರ, 1 ಫೆಬ್ರವರಿ 2010( 13:46 IST )
PTI
ಫೆಬ್ರುವರಿ 14ರ ಪ್ರೇಮಿಗಳ ದಿನಾಚರಣೆಗೆ ಈ ಬಾರಿಯೂ ಅಡ್ಡಿಪಡಿಸುವುದಾಗಿ ಶ್ರೀರಾಮಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್ ಗುಡುಗಿದ್ದು, ವ್ಯಾಲೆಂಟೈನ್ ಎಂಬ ಸತ್ತ ವ್ಯಕ್ತಿಯ ದಿನವನ್ನು ಪ್ರೇಮಿಗಳ ದಿನ ಎಂದು ಆಚರಿಸುವುದು ಎಷ್ಟು ಸರಿ ಎಂಬುದಾಗಿ ಪ್ರಶ್ನಿಸಿದ್ದಾರೆ.
ಕಳೆದ ವರ್ಷವೂ ಕೂಡ ಪ್ರೇಮಿಗಳ ದಿನಾಚರಣೆಯಂದು ಅಕ್ಕ-ಪಕ್ಕ ಕುಳಿತ ಜೋಡಿಗಳು ಕಂಡು ಬಂದರೆ ಅವರಿಗೆ ತಾಳಿ ಕಟ್ಟಿ ಮದುವೆ ಮಾಡಿಸುವುದಾಗಿ ಬೆದರಿಕೆ ಹಾಕಿರುವ ಶ್ರೀರಾಮಸೇನೆಯ ಹೇಳಿಕೆ ದೇಶಾದ್ಯಂತ ತೀವ್ರ ವಿವಾದಕ್ಕೆ ಒಳಗಾಗಿತ್ತು.
ವಿದೇಶಿ ಸಂಸ್ಕೃತಿಯನ್ನು ನಮ್ಮ ಮೇಲೆ ಹೇರುವ ಕೆಟ್ಟ ಪರಂಪರೆಯನ್ನು ಬಲವಾಗಿ ವಿರೋಧಿಸುವುದಾಗಿ ಹೇಳಿರುವ ಮುತಾಲಿಕ್, ಪ್ರೇಮಿಗಳ ದಿನಾಚರಣೆಗೆ ಅವಕಾಶ ನೀಡಬಾರದು ಎಂದು ಕೋರಿ ಕಾಲೇಜು, ಹೋಟೆಲ್, ಪಬ್ಗಳಿಗೆ ಮನವಿ ಪತ್ರವನ್ನು ನೀಡಲು ನಿರ್ಧರಿಸಿರುವುದಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತ ವಿವರಿಸಿದರು.
ಅಲ್ಲದೇ, ಪ್ರೇಮಿಗಳ ದಿನವನ್ನು ಆಚರಿಸದಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು. ಒಂದು ವೇಳೆ ಶಾಲಾ-ಕಾಲೇಜು, ಹೊಟೇಲ್ಗಳಲ್ಲಿ ನಮ್ಮ ಮನವಿಯನ್ನು ಧಿಕ್ಕರಿಸಿ ಪ್ರೇಮಿಗಳ ದಿನಾಚರಣೆಗೆ ಅವಕಾಶ ಮಾಡಿಕೊಟ್ಟಲ್ಲಿ ಶ್ರೀರಾಮಸೇನೆ ಅದಕ್ಕೆ ಅಡ್ಡಿಪಡಿಸುವುದಾಗಿ ಎಚ್ಚರಿಕೆಯನ್ನೂ ಈ ಸಂದರ್ಭದಲ್ಲಿ ನೀಡಿದರು.
ಕಳೆದ ವರ್ಷ ಪ್ರೇಮಿಗಳ ದಿನಾಚರಣೆಯಂದ ಸೆರೆಸಿಗುವ ಜೋಡಿಗಳಿಗೆ ಸ್ಥಳದಲ್ಲೇ ಮದುವೆ ಮಾಡಿಸುವುದಾಗಿ ಎಚ್ಚರಿಕೆ ನೀಡಿದ್ದ ಶ್ರೀರಾಮಸೇನೆಯ ವರಿಷ್ಠ ಮುತಾಲಿಕ್ಗೆ ಪಿಂಕ್ ಚಡ್ಡಿ ಕಳುಹಿಸುವಂತೆ ಪತ್ರಕರ್ತೆ ಸುಸಾನ್ ಕರೆ ನೀಡಿದ್ದು, ಅದರಂತೆ ಫೆ.14ರಂದು ಹುಬ್ಬಳ್ಳಿಯಲ್ಲಿರುವ ಮುತಾಲಿಕ್ ಕಚೇರಿ ತುಂಬಾ ಪಿಂಕ್ ಚಡ್ಡಿಗಳಿಂದಲೇ ತುಂಬಿ ಹೋಗಿತ್ತು. ಆದರೆ ಈ ಬಾರಿ ಯಾರು ಪಿಂಕ್ ಚಡ್ಡಿ ಕಳುಹಿಸಲು ಆಹ್ವಾನ ನೀಡುತ್ತಾರೆ ಎಂಬುದು ಕುತೂಹಲದ ಪ್ರಶ್ನೆಯಾಗಿದೆ.