ನೈಸ್ ಕಂಪನಿ ನಿರ್ಮಿಸುತ್ತಿರುವ ಬೆಂಗಳೂರು-ಮೈಸೂರು ರಸ್ತೆ ಪ್ರದೇಶದಲ್ಲಿ ತಮಗೆ ಒಂದಿಂಚೂ ಭೂಮಿಯಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿರುವ ಬೆನ್ನಲ್ಲೇ ಅವರ ಕುಟುಂಬದವರು ಭೂಮಿ ಹೊಂದಿರುವ ಅಂಶ ಬಹಿರಂಗಗೊಂಡಿದೆ.
ನೈಸ್ನಲ್ಲಿ ಭೂಮಿ ಕಳೆದುಕೊಂಡ ರೈತರ ಪರವಾಗಿ ಹೋರಾಟ ನಡೆಸಿರುವ ದೇವೇಗೌಡರು ತಮ್ಮ ಕುಟುಂಬದ ಸದಸ್ಯರ ಭೂಮಿ ರಕ್ಷಣೆಗೂ ಮುಂದಾಗಿರುವುದು ಈಗಾಗಲೇ ಜಗಜ್ಜಾಹೀರಾಗಿದೆ.
ರಾಮನಗರ ಜಿಲ್ಲೆ ಬಿಡದಿ ಹೋಬಳಿ ಕೇತಗಾನಹಳ್ಳಿಯಲ್ಲಿ 45 ಎಕರೆ ಭೂಮಿ ಎಚ್.ಡಿ.ಕುಮಾರಸ್ವಾಮಿ ಹೆಸರಿನಲ್ಲಿದೆ. ಇದು ಯಾವ ರೀತಿ ಬಂದಿತು ಎಂಬುದು ಕುತೂಹಲಕಾರಿ. ಸರ್ಕಾರದ ಭೂಮಿ ಪಡೆಯಲು ಇವರು ತಮ್ಮದೇ ಆದ ವಿಧಾನವನ್ನು ಅನುಸರಿಸುತ್ತಾರೆ. ಗೌಡರ ಸಂಬಂಧಿ ವಿಧವೆ ಸಾವಿತ್ರಮ್ಮ ಜಮೀನಿಗಾಗಿ ಅರ್ಜಿ ಸಲ್ಲಿಸಿ ಸರಕಾರದಿಂದ ಅದನ್ನು ಪಡೆದಿದ್ದರು. ಅದು ಕೆಲಕಾಲದ ನಂತರ ಕುಮಾರಸ್ವಾಮಿ ಹೆಸರಿಗೆ ಮ್ಯೂಟೇಷನ್ ಆಗಿರುವುದಾಗಿ ಮೂಲವೊಂದು ತಿಳಿಸಿದೆ.