ಉಪರಾಷ್ಟ್ರಪತಿ ಕಚೇರಿ ಅವಾಂತರ: ಬೆಳಗಾವಿ ಮಹಾರಾಷ್ಟ್ರದಲ್ಲಿದೆಯಂತೆ!
ಬೆಂಗಳೂರು, ಸೋಮವಾರ, 1 ಫೆಬ್ರವರಿ 2010( 18:55 IST )
ಉಪರಾಷ್ಟ್ರಪತಿ ಕಾರ್ಯಾಲಯದ ಅಧಿಕಾರಿಗಳು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಬರೆದಿರುವ ಪತ್ರದಲ್ಲಿ ಮಹಾರಾಷ್ಟ್ರ ಎಂದು ನಮೂದಿಸಿರುವ ಅಂಶ ಕನ್ನಡ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
ಈ ಕುರಿತು ಉಪರಾಷ್ಟ್ರಪತಿ ಕಾರ್ಯಾಲಯ ಹಾಗೂ ಇಂತ ಅಪರಾಧಕ್ಕೆ ಕಾರಣವಾದ ಅಧಿಕಾರಿಗಳು ಕೂಡಲೇ ಕ್ಷಮೆ ಯಾಚಿಸಬೇಕೆಂದು ಸಂಘಟನೆಗಳು ಆಗ್ರಪಡಿಸಿವೆ.
ಮಹಿಳೆಯೊಬ್ಬರು ಜಮೀನು ವಿವಾದದ ಸಂಬಂಧ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಅದರ ಪ್ರತಿಗಳನ್ನು ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಕಾರ್ಯಾಲಯಕ್ಕೆ ಕಳುಹಿಸಲಾಗಿತ್ತು. ಆದರೆ ಬೆಳಗಾವಿ ಕರ್ನಾಟಕದಲ್ಲಿದೆಯೇ ಅಥವಾ ಮಹಾರಾಷ್ಟ್ರದಲ್ಲಿಯೇ ಎಂಬ ಕನಿಷ್ಠ ಜ್ಞಾನವಿಲ್ಲದ ಅಧಿಕಾರಿಗಳು ಈ ಅವಾಂತರ ಸೃಷ್ಟಿಸಿರುವುದು ಕನ್ನಡಪರ ಸಂಘಟನೆಗಳ ಆಕ್ರೋಶ ಕಾರಣವಾಗಿದೆ.
ಬೆಳಗಾವಿ ಗಡಿ ವಿವಾದ ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವೆ ಮುಸುಕಿನ ಗುದ್ದಾಟಕ್ಕೆ ವೇದಿಕೆಯಾಗಿರುವ ಸಂದರ್ಭದಲ್ಲೇ ಉಪ ರಾಷ್ಟ್ರಪತಿ ಕಾರ್ಯಾಲಯದ ಪತ್ರ ಮತ್ತೊಂದು ಅವಾಂತರ ಸೃಷ್ಟಿಸಿದೆ.