ನಮ್ಮ ಭೂಮಿ ಇದ್ರೆ ಸರ್ಕಾರ ವಶಪಡಿಸಿಕೊಳ್ಲಿ: ಎಚ್ಡಿಕೆ ಸವಾಲ್
ಮೈಸೂರು, ಮಂಗಳವಾರ, 2 ಫೆಬ್ರವರಿ 2010( 09:04 IST )
NRB
ಬಿಎಂಐಸಿ ವ್ಯಾಪ್ತಿಯಲ್ಲಿ ತಮ್ಮ ಅಥವಾ ಕುಟುಂಬ ಸದಸ್ಯರು ಜಮೀನು ಹೊಂದಿದ್ದರೆ ಸರ್ಕಾರ ಅಥವಾ ಅಡ್ವೊಕೇಟ್ ಜನರಲ್ ಸ್ವಾಧೀನ ಪಡಿಸಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಇಲ್ಲಿನ ಖಾಸಗಿ ಹೊಟೇಲ್ವೊಂದರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಂಐಸಿ ಯೋಜನೆಯಲ್ಲಿ ನನ್ನ ಹೆಸರಿಗೆ ಯಾವುದೇ ಭೂಮಿಯಿಲ್ಲ. ಆದರೆ ಬಿಡದಿ ಬಳಿ ನನ್ನ ಹೆಸರಿನಲ್ಲಿ ಜಮೀನು ಇದೆ. ಇದನ್ನು ರೈತರಿಂದ ಮಾರುಕಟ್ಟೆ ಬೆಲೆಗೆ ಖರೀದಿಸಿದ್ದೇನೆ. ಇದರಲ್ಲಿ ಯಾವುದೇ ರೀತಿಯ ವಂಚನೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬಿಎಂಐಸಿ ವ್ಯಾಪ್ತಿಯಲ್ಲಿ ನನ್ನ ಹೆಸರಿನ ಜಮೀನು ಇದ್ದರೆ ಸರ್ಕಾರಕ್ಕೆ ಬಿಟ್ಟುಕೊಡುತ್ತೇನೆ. ತಾವು ಭೂಮಿಯನ್ನು ಸರ್ಕಾರದಿಂದ ಬಳುವಳಿಯಾಗಿ ಪಡೆದಿಲ್ಲ ಎಂದರು. ಆಡಳಿತಾರೂಢ ಬಿಜೆಪಿ ಪಕ್ಷ ವಿನಾಕಾರಣ ಆರೋಪಿಸುತ್ತಿರುವುದಾಗಿ ಹೇಳಿದರು.
ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ. ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಲಕ್ಷಾಂತರ ಮಂದಿ ಮನೆ ಮಠ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಸಂತ್ರಸ್ತರಿಗೆ ನೆರವು ನೀಡುವುದನ್ನು ಬಿಟ್ಟು ಮುಖ್ಯಮಂತ್ರಿಗಳು ಅಮಿತಾಬ್ ಬಚ್ಚನ್ ಅವರ ಸಿನಿಮಾ ಬಿಡುಗಡೆಗೆ ಪ್ರಚಾರಕ್ಕೆ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದ್ದು, ಇವರೊಬ್ಬ ಸಿನಿಮಾ ಪ್ರಮೋಟ್ ಮಾಡುವ ಏಜೆಂಟ್ ಎಂದು ಆರೋಪಿಸಿದರು.