ಇಲ್ಲಿನ ಗಾಂಧಿನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್ಮೆಂಟ್ ಕುಸಿತ ದುರಂತದ ಶೋಧ ಕಾರ್ಯಾಚರಣೆ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಸೋಮವಾರ 8 ಹಾಗೂ ಮಂಗಳವಾರ 4ಮೃತದೇಹಗಳು ಪತ್ತೆಯಾಗುವುದರೊಂದಿಗೆ ಸಾವನ್ನಪ್ಪಿದವರ ಸಂಖ್ಯೆ 24ಕ್ಕೆ ಏರಿದಂತಾಗಿದೆ.
ಸೋಮವಾರ ಪತ್ತೆಯಾದ ಶವಗಳನ್ನು ಗುಲ್ಬರ್ಗ ಜಿಲ್ಲೆ ಚಿತ್ತಾಪುರ ತಾಲೂಕು ಡೋಣಗಾಂವ್ ಗ್ರಾಮದ ಮಲ್ಲಪ್ಪ(22), ಯಾದಗಿರಿ ಜಿಲ್ಲೆ ಸುರಪುರ ತಾಲೂಕು ಹುಣಸಿಹೊಳೆ ಗ್ರಾಮದ ದಂಪತಿ ಬಸವರಾಜ್(35) ಮತ್ತು ಮಲ್ಲಮ್ಮ(30), ಅದೇ ಗ್ರಾಮದ ಇನ್ನೊಂದು ಕುಟುಂಬಕ್ಕೆ ಸೇರಿದ ದಂಪತಿ ಹುಲುಗಪ್ಪ(31) ಮತ್ತು ಹುಲಿಗೆಮ್ಮ(25), ಅವರ ಮಕ್ಕಳಾದ ರೇಖಾ(5), ಸುರೇಖಾ(2) ಎಂದು ಗುರುತಿಸಲಾಗಿದೆ.
ಕಟ್ಟಡದ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರಿದಿದ್ದು, ಇನ್ನೂ ಏಳು ಮೃತದೇಹಗಳು ಅವಶೇಷದಡಿಯಲ್ಲಿ ಸಿಲುಕಿರುವ ಸಾಧ್ಯತೆ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ದುರಂತದಲ್ಲಿ ಈವರೆಗೆ 19ಮಂದಿಯನ್ನು ರಕ್ಷಿಸಲಾಗಿದೆ.