ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲು ಯಾರು ಕಾರಣ ಎಂಬುದು ಜನರಿಗೆ ತಿಳಿದಿದೆ. ಅಧಿಕಾರದ ಆಸೆಯಿಂದ ಒಮ್ಮೆ ಕಾಂಗ್ರೆಸ್, ಮತ್ತೊಮ್ಮೆ ಬಿಜೆಪಿ ಜತೆ ಕೈಜೋಡಿಸುವ ಕುಮಾರಸ್ವಾಮಿ ಜೋಕರ್ ರಾಜಕಾರಣಿ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಕಟುವಾಗಿ ಟೀಕಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಹೋರಾಟದ ಬಗ್ಗೆ ಭಾಷಾ ಜ್ಞಾನವಿಲ್ಲದ ರಾಜಕಾರಣಿಗಳಿಂದ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಟೀಕೆಗೆ ಪ್ರತಿಕ್ರಿಯೆ ನೀಡಿದರು.
ದೇವೇಗೌಡ ಮತ್ತು ಕುಮಾರಸ್ವಾಮಿಗೆ ಮಾತಿನ ಮೇಲೆ ಹಿಡಿತವಿಲ್ಲ. ಇವರ ನಡವಳಿಕೆಯೇ ಸರಿ ಇಲ್ಲದಿರುವಾಗ ರೈತಸಂಘದ ಹೋರಾಟದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅವರಿಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಚಾಮುಂಡೇಶ್ವರಿ ಕ್ಷೇತ್ರ ಉಪಚುನಾವಣೆಯಲ್ಲಿ ಅಪ್ಪ-ಮಕ್ಕಳ ನಡವಳಿಕೆಗಳು ಜಗಜ್ಜಾಹೀರಾಗಿದೆ. ಅವರ ನೀತಿ, ನಿಲುವುಗಳೇ ಸರಿ ಇಲ್ಲ ಎಂದಾದ ಮೇಲೆ ನಮಗೆ ಉಪದೇಶ ಮಾಡಲು ಹೊರಟಿದ್ದಾರೆ. ರೈತರ ಸಮಸ್ಯೆಗಳಿಗೆ ಪರಿಹಾರ ಸಿಗುವವರೆಗೆ ರೈತ ಸಂಘದ ಹೋರಾಟ ನಿರಂತರವಾಗಿ ನಡೆಯುತ್ತದೆ. ಇದಕ್ಕೆ ಯಾರ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ನಾಲಿಗೆ ಸಂಸ್ಕೃತಿ ಮತ್ತು ಕುಲವನ್ನು ಹೇಳುತ್ತದೆ. ಚಳವಳಿ ಬಗ್ಗೆ ಜ್ಞಾನವಿಲ್ಲದವರು ರೈತಸಂಘ ಮತ್ತು ರೈತರ ಬಗ್ಗೆ ಮಾತನಾಡುವಾಗ ಕುಮಾರಸ್ವಾಮಿ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳುವುದು ಉತ್ತಮ ಎಂದು ಪುಟ್ಟಣ್ಣಯ್ಯ ಸಲಹೆ ನೀಡಿದರು.