ಸುಮಾರು 15ಕ್ಕೂ ಹೆಚ್ಚು ಕ್ರಿಮಿನಲ್ ಆರೋಪ ಹೊತ್ತ ಮಾನವ ಹಕ್ಕು ಪರಿಷತ್ ಅಧ್ಯಕ್ಷ ವಿವೇಕಾನಂದ(40)ನನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ಕಾರವಾರ ಜಿಲ್ಲೆಯ ನಿವಾಸಿಯಾದ ವಿವೇಕಾನಂದ ನಗರದ ಇಸ್ರೋ ಲೇಔಟ್ನಲ್ಲಿ ನೆಲೆಸಿದ್ದು ಮಾನವ ಹಕ್ಕು ಪರಿಷತ್ ಹೆಸರು ಹೇಳಿಕೊಂಡು ಹಲವಾರು ಜನರಿಗೆ ವಂಚಿಸಿರುವುದು ಇದೀಗ ಬೆಳಕಿಗೆ ಬಂದಿದೆ.
ರಾಜ್ಯಾದ್ಯಂತ ತೀವ್ರ ಟೀಕೆಗೆ ಒಳಗಾಗಿದ್ದ ಪ್ರಿಯಾಂಕ ಪ್ರಕರಣದಲ್ಲೂ ವಂಚಿಸಿರುವುದು, ಮಹಿಳಾ ಸಂಘಟನೆಯ ವೀಣಾ ಎನ್ನುವ ಮಹಿಳೆಗೆ ಬೆದರಿಕೆ ಹಾಕಿರುವುದು, ಹೊಸಕೋಟೆ ತಾಲೂಕಿನ ಆಟೋಚಾಲಕ ನಾಗರಾಜ್ ಎನ್ನುವರ ಭೂ ವ್ಯವಹಾರದಲ್ಲಿ ವಂಚನೆ ಮತ್ತು ನಿವೃತ್ತ ಲೋಕಾಯುಕ್ತ ವೆಂಕಟಾಚಲಯ್ಯ ಅವರ ಬಳಿ ಕಾರ್ಯನಿರ್ವಹಿಸುತ್ತಿದ್ದ ನರೇಂದ್ರ ಶರ್ಮಾ ಎಂಬ ವ್ಯಕ್ತಿಗೂ ವಂಚನೆ ಮಾಡಿದ ಆರೋಪಗಳು ವಿವೇಕಾನಂದನ ವಿರುದ್ಧ ದಾಖಲಾಗಿದೆ.
ವಿವೇಕಾನಂದ ನಿರೀಕ್ಷಣಾ ಜಾಮೀನು ಪಡೆದಿದ್ದು ಉಪ್ಪಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಲೋಕೇಶ್ವರ ಅವರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆಂದು ಡಿಸಿಪಿ ಶಿವಕುಮಾರ್ ತಿಳಿಸಿದ್ದಾರೆ.