ಬಿಬಿಎಂಪಿ ಚುನಾವಣೆ ವಿವಾದದ ಕುರಿತು ಸುದೀರ್ಘ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರು ಮಂಗಳವಾರ ಏಕಾಏಕಿ ವಿಚಾರಣೆಯನ್ನು ಮುಂದುವರಿಸಲು ನಿರಾಕರಿಸುವ ಮೂಲಕ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.
ಸೋಮವಾರ ನಡೆಯಬೇಕಿದ್ದ ಈ ವಿಚಾರಣೆ ಇಂದು ಪ್ರಕರಣಗಳ ಪಟ್ಟಿಯ ಕ್ರಮಾಂಕ 53ರಲ್ಲಿ ಇತ್ತು. ಆದರೆ ಬೆಳಿಗ್ಗೆ ವಿಚಾರಣೆಯನ್ನು ಕೈಗೆತ್ತಿಕೊಳ್ಳುವಂತೆ ಅರ್ಜಿದಾರ ಮಾಜಿ ಮೇಯರ್ಗಳ ಪರ ವಕೀಲ ಎಲ್.ಲಕ್ಷ್ಮೀನಾರಾಯಣ್ ಮನವಿ ಮಾಡಿಕೊಂಡಾಗ, ತಕ್ಷಣ ಪ್ರತಿಕ್ರಿಯಿಸಿದ ನ್ಯಾ.ಗೋಪಾಲಗೌಡರ ನೇತೃತ್ವದ ಪೀಠ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಮುಖ್ಯಪೀಠದ ಮುಂದೆ ನಡೆಸಲು ಮೆಮೋ ಹಾಕಿಕೊಳ್ಳಿ ಎಂದು ಸ್ಪಷ್ಟವಾಗಿ ಹೇಳಿದರು. ಮಧ್ನಾಹ್ನದ ವಿಚಾರಣೆಯಲ್ಲಾದರೂ ಪ್ರಕರಣ ಕೈಗೆತ್ತಿಕೊಳ್ಳಿ ಎಂಬ ಮನವಿಯನ್ನೂ ತಳ್ಳಿಹಾಕಿದರು.
ಹೈಕೋರ್ಟ್ನ ಇಂದಿನ ಬೆಳವಣಿಗೆಯಿಂದಾಗಿ ಈ ವಿವಾದದ ವಿಚಾರಣೆ ಬೇರೆ ವಿಭಾಗೀಯ ಪೀಠಕ್ಕೆ ವರ್ಗಾವಣೆಯಾಗುವುದು ಖಚಿತವಾಗಿದೆ. ಈ ಎಲ್ಲ ಬೆಳವಣಿಗೆ ಗಮನಿಸಿದಾಗ ಮಹಾನಗರ ಪಾಲಿಕೆ ಚುನಾವಣೆ ಮತ್ತಷ್ಟು ವಿಳಂಬವಾಗುವ ಮುನ್ಸೂಚನೆ ಕಂಡು ಬಂದಿದೆ.